ದೇವರ ದಯೆ ಇರೋವರೆಗೆ ಸರ್ಕಾರ ನಡೆಯಲಿದೆ: ಎಚ್.ಡಿ.ರೇವಣ್ಣ

ಬೆಂಗಳೂರು: ನಮಗೆ ಇದು ದೇವರು ಕೊಟ್ಟ ಅಧಿಕಾರ, ಅವನ ದಯೆ ಇರುವವರೆಗೆ ಸರ್ಕಾರ ನಡೆಯಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಶಾಸಕರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಅಧಿಕಾರವನ್ನು ದೇವರು ಕೊಟ್ಟಿದ್ದಾನೆ. ಎಲ್ಲಿಯವರೆಗೂ ದೇವರು ಅಧಿಕಾರ ಕೊಡುತ್ತಾನೋ ಅಲ್ಲಿವರೆಗೂ ಇಟ್ಟುಕೊಳ್ಳುತ್ತೇವೆ. ದೇವರ ದಯೆ ಇರೋವರೆಗೆ ಸರ್ಕಾರ ನಡೆಯಲಿದೆ ಎಂದು ಸಚಿವ ಎಚ್.ಡಿ.ರೇವಣ್ಣ ದೇವರ ಮೇಲೆ ಭಾರ ಹಾಕಿದ್ದಾರೆ.

ಬಡವರ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಹೋರಾಡುತ್ತಿದ್ದಾರೆ. ಸರ್ಕಾರದ ವಿಚಾರದಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಕೈಗೊಂಡ ನಿರ್ಧಾರಕ್ಕೆ ನಾವು ಬದ್ಧರಾಗಿದ್ದು, ಯಾವುದೇ ತೀರ್ಮಾನದ ಕುರಿತು ಆಕ್ಷೇಪವಿಲ್ಲ. ಪಕ್ಷದ ಸಭೆಯಲ್ಲಿ ನಾಯಕತ್ವ ಬದಲಾವಣೆ ಕುರಿತು ಯಾವುದೇ ರೀತಿಯ ಚರ್ಚೆಯಾಗಿಲ್ಲ. ನಾಯಕತ್ವ ಬದಲಾವಣೆ ಕುರಿತು ಕೆಲವು ಮಾಧ್ಯಮಗಳು ಸುದ್ದಿಯನ್ನು ಸೃಷ್ಟಿಸುತ್ತಿವೆ ಎಂದರು.

ಇತ್ತೀಚೆಗೆ ಚೆಸ್ಕಾಂ ಮುಖ್ಯ ಕಾರ್ಯನಿರ್ವಾಹಕ ಕಚೇರಿ ಉದ್ಘಾಟನೆ ವೇಳೆಯೂ ಸಹ ಸಚಿವ ರೇವಣ್ಣ ಇದೇ ರೀತಿ ಹೇಳಿದ್ದರು. ಒಂದು ವರ್ಷದಿಂದ ಸರ್ಕಾರ ಆಗ ಬೀಳುತ್ತೆ ಈಗ ಬೀಳುತ್ತೆ ಎಂದು ಹೇಳುತ್ತಿದ್ದಾರೆ. ದೈವಾನುಗ್ರಹದಿಂದ ನಮ್ಮ ಸರ್ಕಾರ ಉಳಿದಿದೆ. ಸರ್ಕಾರ ಎಷ್ಟು ದಿನ ಇರುತ್ತೋ ಅಷ್ಟು ದಿನ ಕೆಲಸ ಮಾಡುತ್ತೇವೆ ಎಂದು ಹೇಳುವ ಮೂಲಕ ದೇವರ ಮೇಲೆ ಭಾರ ಹಾಕಿದ್ದರು. ಇಂದು ಸಹ ಮಾಧ್ಯಮದವರೊಂದಿಗೆ ಮಾತನಾಡಿ ಅದೇ ರೀತಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *