ದೋಸ್ತಿ ಸರ್ಕಾರದ ಪತನಕ್ಕೆ ಕೌಂಟ್‍ಡೌನ್ – ಇವತ್ತು ಇನ್ನಷ್ಟು ಅತೃಪ್ತ ಶಾಸಕರು ರಿಸೈನ್

ಬೆಂಗಳೂರು: ದೋಸ್ತಿ ಸರ್ಕಾರ ಪತನಕ್ಕೆ ಕೌಂಟ್‍ಡೌನ್ ಶುರುವಾಗಿದ್ದು, ಈಗಾಗಲೇ 14 ಅತೃಪ್ತ ಶಾಸಕರು ಅಧಿಕೃತವಾಗಿ ರಾಜೀನಾಮೆ ಕೊಟ್ಟಿದ್ದಾರೆ. ಈಗ ಮೈತ್ರಿ ಸರ್ಕಾರದ ಮತ್ತಷ್ಟು ವಿಕೆಟ್‍ಗಳು ಪತನವಾಗುವ ಸಾಧ್ಯತೆ ಇದೆ.

ಇಂದು ಇನ್ನಷ್ಟು ಅತೃಪ್ತ ಶಾಸಕರು ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ, ಎಚ್‍ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ, ಖಾನಾಪುರದ ಶಾಸಕಿ ಅಂಜಲಿ ನಿಂಬಾಳ್ಕರ್, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್, ಜಯನಗರ ಶಾಸಕಿ ಸೌಮ್ಯ ರೆಡ್ಡಿ ಮತ್ತು ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ ರಾಜೀನಾಮೆ ನೀಡುವ ಶಾಸಕರ ಪಟ್ಟಿಯಲ್ಲಿ ಹೆಸರಿದೆ.

ಇಂದು ರಾಜೀನಾಮೆ ಕೊಡುವವರ ಪಟ್ಟಿಯಲ್ಲಿರುವ ಶಾಸಕರು ಈ ಹಿಂದೆಯೇ ರಾಜೀನಾಮೆ ಕೊಡುವ ಬಗ್ಗೆ ಮಾತನಾಡಿದ್ದರು. ಹೀಗಾಗಿ ಇಂದು ಅತೃಪ್ತ ಶಾಸಕರು ರಾಜೀನಾಮೆ ಕೊಡುವ ಸಾಧ್ಯತೆ ಇದೆ. ಕಳೆದ ದಿನ ರಮೇಶ್ ಜಾರಕಿಹೊಳಿ, ಬಿ.ಸಿ. ಪಾಟೀಲ್, ಪ್ರತಾಪ್‍ಗೌಡ ಪಾಟೀಲ್, ಶಿವರಾಮ್ ಹೆಬ್ಬಾರ್, ಮಹೇಶ್ ಕುಮಟಳ್ಳಿ, ಎಚ್. ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯ, ರಾಮಲಿಂಗಾರೆಡ್ಡಿ, ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ, ಮತ್ತು ಆನಂದ ಸಿಂಗ್ ರಾಜೀನಾಮೆ ನೀಡಿದ್ದಾರೆ.

ಶನಿವಾರ ರಾಜೀನಾಮೆ ಕೊಟ್ಟ ನಂತರ ಸಂಜೆ 6.35ಕ್ಕೆ ಎಚ್‍ಎಎಲ್‍ನಿಂದ ವಿಮಾನ ಟೇಕಾಫ್ ಆಗಿ, ರಾತ್ರಿ 8.10ಕ್ಕೆ ಮುಂಬೈನಲ್ಲಿ ಲ್ಯಾಂಡ್ ಆಗಿದೆ. ರಾಮಲಿಂಗಾರೆಡ್ಡಿ, ಮುನಿರತ್ನ ಹಾಗೂ ಆನಂದ್ ಸಿಂಗ್ ಅವರು ಮುಂಬೈಗೆ ಹೋಗಿಲ್ಲ. ಆದರೆ ರೆಸಾರ್ಟ್ ರಾಜಕೀಯವನ್ನು ವಿರೋಧಿಸಿದ್ದ ವಿಶ್ವನಾಥ್ ಅವರೇ ಸಾರಥ್ಯ ವಹಿಸಿ, 10 ಜನರೊಂದಿಗೆ ಮುಂಬೈನ ರಿನೈಸಾನ್ಸ್ ಹೋಟೆಲ್ ತಲುಪಿದ್ದಾರೆ. ಇವರ ಜೊತೆಯಲ್ಲಿ ಮಲ್ಲೇಶ್ವರದ ಬಿಜೆಪಿ ಶಾಸಕ ಡಾ.ಅಶ್ವಥ್ ನಾರಾಯಣ, ಬಿಎಸ್‍ವೈ ಪಿಎ ಸಂತೋಷ್ ಇದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *