ಪುಂಡರ ತ್ರಿಬಲ್ ರೈಡಿಂಗ್-ಪ್ರಶ್ನಿಸಿದ ಪೇದೆಯ ಮೇಲೆ ಹಲ್ಲೆಗೆ ಯತ್ನ

ಬೆಂಗಳೂರು: ತ್ರಿಬಲ್ ರೈಡಿಂಗ್ ಪ್ರಶ್ನಿಸಿದ ಟ್ರಾಫಿಕ್ ಪೊಲೀಸ್ ಪೇದೆಗೆ ಪುಂಡರು ಚಾಕು ಇರಿಯಲು ಯತ್ನಿಸಿದ ಘಟನೆ ನಗರದ ಮಣಿಪಾಲ್ ಸೆಂಟರ್ ಬಳಿ ನಡೆದಿದೆ.

ಹಲಸೂರು ಸಂಚಾರಿ ಠಾಣೆಯ ಮಹೇಶ್ ಅವರಿಗೆ ಪುಂಡರು ಚಾಕು ಇರಿಯಲು ಯತ್ನಿಸಿದರು. ಅದೃಷ್ಟವಶಾತ್ ಮಹೇಶ್ ಅವರು ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಮಹೇಶ್ ಅವರ ಕತ್ತಿನ ಭಾಗದ ಶರ್ಟ್ ತುಂಡಾಗಿದೆ.

ಪೇದೆ ಮಹೇಶ್ ಅವರು ಹಲಸೂರು ಸಂಚಾರಿ ಠಾಣಾ ವ್ಯಾಪ್ತಿಯ ಟ್ರಾಫಿಕ್ ಸಿಗ್ನಲ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಸ್ಕೂಟಿಯಲ್ಲಿ ಮೂವರು ಪುಂಡರು ಬರುತ್ತಿದ್ದರು. ಪೊಲೀಸರು ಬೈಕ್‍ಗೆ ಅಡ್ಡಹಾಕಲು ಬರುತ್ತಿದ್ದನ್ನು ನೋಡಿದ ಪುಂಡರು ಯೂಟರ್ನ್ ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದರು. ಬಳಿಕ ಮಹೇಶ್ ಅವರು ವಾಪಸ್ಸು ಸಿಗ್ನಲ್ ಪಾಯಿಂಟ್‍ಗೆ ಬರುತ್ತಿದ್ದಾಗ ಹಿಂಬದಿಯಿಂದ ಬಂದ ಪುಂಡರು ಚಾಕು ಹಾಕಲು ಮುಂದಾಗಿದ್ದರು.

ಸಿಗ್ನಲ್‍ನಲ್ಲಿದ್ದ ಜನರು ಕೂಗಿ, ಚಾಕು ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು. ತಕ್ಷಣವೇ ಪುಂಡರು ಪರಾರಿಯಾಗಲು ಯತ್ನಿಸಿದರು. ಈ ವೇಳೆ ಆರೋಪಿಗಳು ಚಾಕು ಇರಿಯಲು ಯತ್ನಿಸಿದ ಪರಿಣಾಮ ಪೇದೆ ಮಹೇಶ್ ಅವರ ಕತ್ತಿನ ಭಾಗದ ಶರ್ಟ್ ಕತ್ತರಿಸಿ ಕೆಳಗೆ ಬಿದಿದೆ. ಆರೋಪಿಗಳು ಸ್ಕೂಟಿ ಹಾಗೂ ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಸ್ಥಳದಲ್ಲಿಯೇ ಎಸೆದು ಪೊಲೀಸರಿಂದ ತಪ್ಪಿಸಿಕೊಂಡು ಹೋಗಿದ್ದಾರೆ.

ಈ ಸಂಬಂಧ ಹಲಸೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಕೂಟಿ ಹಾಗೂ ಚಾಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ತನಿಖೆ ಆರಂಭಿಸಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *