ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರ ಬರ್ಬರ ಹತ್ಯೆ

ಲಕ್ನೋ: ಹಲ್ಲೆ ಮಾಡಿ ಒಂದೇ ಕುಟುಂಬದ ಐವರನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಹಮೀರ್ಪುರ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ರಾಣಿ ಲಕ್ಷ್ಮಿಬಾಯಿ ಮೊಹಲ್ಲಾದಲ್ಲಿ ಗುರುವಾರ ಸಂಜೆ ನಡೆದಿದೆ. ರಾಯೀಸ್ (27), ಪತ್ನಿ ರೋಶನಿ (25) ಮಕ್ಕಳು ಆಲಿಯಾ (4) ತಾಯಿ ಸಕೀನಾ (80) ಮತ್ತು ರೋಶಿನಿಯ ಸಂಬಂಧಿ (15) ಮೃತ ದುರ್ದೈವಿಗಳು ಎಂದು ಎಸ್‍ಪಿ ಹೇಮ್‍ರಾಜ್ ಮೀನಾ ತಿಳಿಸಿದ್ದಾರೆ.

ಮೃತ ರಾಯೀಸ್ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಐವರು ನೂರ್ ಬಕ್ಷ್ ಕುಟುಂಬದವರು ಎಂದು ತಿಳಿದು ಬಂದಿದೆ. ನೂರ್ ಬಕ್ಷ್‍ ಮದುವೆಗೆಂದು ಪಕ್ಕದ ಗ್ರಾಮಕ್ಕೆ ಹೋಗಿದ್ದರು. ಅವರು ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಬಂದಾಗ ಮನೆಯಲ್ಲಿ ಐವರು ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದರು. ಇದನ್ನು ನೋಡಿದ ತಕ್ಷಣ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

ಮೃತರ ತಲೆಗೆ ಸುತ್ತಿಗೆಯಿಂದ ಅಥವಾ ಕಲ್ಲಿನಿಂದ ಹೊಡೆದು ಕೊಲೆ ಮಾಡಿರಬಹುದು. ಸದ್ಯಕ್ಕೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ನಂತರ ಕೊಲೆ ಮಾಡಲು ಯಾವ ರೀತಿಯ ಶಸ್ತ್ರವನ್ನು ಬಳಸಿದ್ದಾರೆ ಎಂದು ತಿಳಿದು ಬರುತ್ತದೆ. ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಇನ್ಸ್ ಪೆಕ್ಟರ್ ಅನಿಲ್ ರಾವ್ ತಿಳಿಸಿದ್ದಾರೆ.

ನೂರ್ ಬಕ್ಷ್‍ಗೆ ಇಬ್ಬರು ಗಂಡು ಮಕ್ಕಳಿದ್ದು, ಎರಡನೇ ಮಗನ ಮನೆಯಲ್ಲಿ ವಾಸವಾಗಿದ್ದರು. ಘಟನೆ ನಡೆದಾಗ ಮೊದಲನೇ ಮಗ ಇರಲಿಲ್ಲ. ಇನ್ನೋ ದರೋಡೆ ಮಾಡಲು ಬಂದ ದುಷ್ಕರ್ಮಿಗಳು ಈ ಕೊಲೆ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಕೊಲೆ ನಡೆದ ಮನೆಯಲ್ಲಿ ಯಾವುದೇ ರೀತಿಯ ದರೋಡೆ ಯತ್ನ ನಡೆದಿಲ್ಲ. ಆ ರೀತಿಯ ಯಾವುದೇ ಪುರಾವೆಗಳು ಕೂಡ ನಮಗೆ ಸಿಕ್ಕಿಲ್ಲ. ಹೀಗಾಗಿ ಪ್ರಾಥಮಿಕ ತನಿಖೆಯ ಪ್ರಕಾರ ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Comments

Leave a Reply

Your email address will not be published. Required fields are marked *