ಜೈ ಶ್ರೀರಾಮ್ ಎನ್ನದ ಮದರಸಾ ಶಿಕ್ಷಕನನ್ನು ಚಲಿಸುತ್ತಿದ್ದ ರೈಲಿನಿಂದ ಹೊರದಬ್ಬಿದ್ರು

– ಸಂತ್ರಸ್ತ ಶಿಕ್ಷಕನಿಗೆ ದೀದಿಯಿಂದ 50 ಸಾವಿರ ರೂ. ಪರಿಹಾರ

ಕೋಲ್ಕತ್ತಾ: ಜೈ ಶ್ರೀರಾಮ್ ಎಂದು ಹೇಳದ ಮದರಸಾ ಶಿಕ್ಷಕನನ್ನು ಗುಂಪೊಂದು ಥಳಿಸಿ ಚಲಿಸುತ್ತಿದ್ದ ರೈಲಿನಿಂದ ಹೊರದಬ್ಬಿರುವ ಅಮಾನವೀಯ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ದಕ್ಷಿಣ 24 ಪರಗಣ ಜಿಲ್ಲೆಯ ಹಫೀಜ್ ಮೊಹಮ್ಮದ್ ಶಾರುಕ್ ಹಲ್ದಾರ್ (26) ರೈಲಿನಿಂದ ಹೊರದಬ್ಬಲ್ಪಟ್ಟ ಮದರಸಾ ಶಿಕ್ಷಕ. ಅದೃಷ್ಟವಶಾತ್ ಶಿಕ್ಷಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯು ಗುರುವಾರವೇ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಆಗಿದ್ದೇನು?:
ಹಫೀಜ್ ಕನ್ನಿಂಗ್‍ನಿಂದ ಹೂಗ್ಲಿಗೆ ರೈಲಿನಲ್ಲಿ ಕಳೆದ ಗುರುವಾರ ಪ್ರಯಾಣಿಸುತ್ತಿದ್ದರು. ಈ ವೇಳೆ ನಾಲ್ಕೈದು ಜನರ ಗುಂಪೊಂದು ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದೆ. ಆದರೆ ಹಫೀಸ್ ಜೈ ಶ್ರೀರಾಮ್ ಎಂದು ಹೇಳಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಹಫೀಸ್ ಅವರನ್ನು ಥಳಿಸಿ, ರೈಲಿನಿಂದ ಹೊರ ದಬ್ಬಿದ್ದಾರೆ.

ರೈಲಿನಲ್ಲಿದ್ದ ಗುಂಪೊಂದು ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿತ್ತು. ಇದನ್ನು ನಿರಾಕರಿಸಿದ್ದಕ್ಕೆ ಹೊಡೆದು, ಪಾರ್ಕ್ ಸರ್ಕಸ್ ಸ್ಟೇಷನ್ ಸಮೀಪದಲ್ಲಿ ರೈಲಿನಿಂದ ಹೊರದಬ್ಬಿದೆ ಎಂದು ಹಫೀಜ್ ದೂರು ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಂತ್ರಸ್ತ ಹಫೀಸ್ ಅವರ ಮುಖ ಹಾಗೂ ದೇಹದ ಮೇಲೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು 50 ಸಾವಿರ ರೂ. ಪರಿಹಾರ ಧನ ನೀಡಿದ್ದಾರೆ.

ಜಾರ್ಖಂಡ್‍ನಲ್ಲಿ ಇಂತಹದ್ದೆ ಘಟನೆ ಇತ್ತೀಚೆಗೆ ನಡೆದಿತ್ತು. ಗುಂಪೊಂದು ಜೈ ಶ್ರೀರಾಮ್ ಮತ್ತು ಜೈ ಹನುಮಾನ್ ಎಂದು ಹೇಳುವಂತೆ ಯುವಕ ತಬ್ರೆಜ್ ಅನ್ಸಾರಿಗೆ ಒತ್ತಾಯಿಸಿತ್ತು. ಇದನ್ನು ನಿರಾಕರಿಸಿದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಘಟನೆಯ ಬೆನ್ನಲ್ಲೇ ಪಶ್ಚಿಮ ಬಂಗಾಳದ ಪ್ರಕರಣ ನಡೆದಿದೆ.

Comments

Leave a Reply

Your email address will not be published. Required fields are marked *