ಪುರಸಭೆ ಅಧಿಕಾರಕ್ಕಾಗಿ ದೋಸ್ತಿ ನಾಯಕರ ಮಧ್ಯೆ ಫೈಟ್ – ಕೈ ನಾಯಕರ ವಿರುದ್ಧ ಕೇಸ್

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಪುರಸಭೆಯಲ್ಲಿ ಅಧಿಕಾರ ಹಿಡಿಯಲು ದೋಸ್ತಿಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಸಮರ ಜೋರಾಗಿ ನಡೆಯುತ್ತಿದೆ.

ಕೆ.ಆರ್.ಪೇಟೆಯ ಕಾಂಗ್ರೆಸ್‍ನ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಂಬಂಧಿಗಳ ವಿರುದ್ಧ ಜೆಡಿಎಸ್ ಪುರಸಭಾ ಸದಸ್ಯರು ಜೀವ ಬೆದರಿಕೆಯ ಆರೋಪ ಮಾಡಿದ್ದಾರೆ. ಈ ಸಂಬಂಧ ಜೆಡಿಎಸ್‍ನ ಪುರಸಭಾ ಸದಸ್ಯ ಸಂತೋಷ್ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಕೆ.ಆರ್.ಪೇಟೆ ಪುರಸಭೆಯಲ್ಲಿ ಅಧಿಕಾರ ಹಿಡಿಯಲು ಎರಡು ಪಕ್ಷಗಳು ಭಾರೀ ಪೈಪೋಟಿ ನಡೆಸುತ್ತಿದೆ. 23 ಸದಸ್ಯ ಬಲದ ಪುರಸಭೆಯಲ್ಲಿ ಜೆಡಿಎಸ್ 11 ಹಾಗೂ ಕಾಂಗ್ರೆಸ್ ಹತ್ತು ಸ್ಥಾನ ಗೆದ್ದಿತ್ತು. ಮ್ಯಾಜಿಕ್ ನಂಬರ್ ಗೆ 12 ಸದಸ್ಯರ ಅವಶ್ಯಕತೆ ಇದ್ದು, ಬಂಡಾಯವಾಗಿ ಸ್ಪರ್ಧಿಸಿ ಗೆದ್ದಿದ್ದ ಓರ್ವ ಸದಸ್ಯ ಈಗಾಗಲೇ ಜೆಡಿಎಸ್ ಸೇರಿದ್ದಾರೆ. ಈ ನಿಟ್ಟಿನಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲು ಕಾಂಗ್ರೆಸ್ ನಾಯಕರು ಜೆಡಿಎಸ್‍ನ ಬಂಡಾಯ ಸದಸ್ಯರು ಹಾಗೂ ಕೆಲವರಿಗೆ ದೂರವಾಣಿ ಕರೆ ಮಾಡಿ ಬೆದರಿಕೆವೊಡ್ಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಹೋದರ ಹಾಗೂ ಪುರಸಭೆ ಸದಸ್ಯ ಕೆ.ಬಿ.ಮಹೇಶ್ ಹಾಗೂ ಚಂದ್ರಶೇಖರ್ ಅವರ ಪುತ್ರ ಶ್ರೀಕಾಂತ್, ಸದಸ್ಯರಿಗೆ ದೂರವಾಣಿ ಕರೆ ಮಾಡಿ ಬೆದರಿಕೆವೊಡ್ಡುತ್ತಿದ್ದಾರೆಂದು ದಕ್ಷಿಣ ವಲಯ ಐಜಿಪಿ ಹಾಗೂ ಕೆ.ಆರ್.ಪೇಟೆ ಪೊಲೀಸರಿಗೆ ಇಬ್ಬರ ವಿರುದ್ಧ ಸಂತೋಷ್ ದೂರು ಕೊಟ್ಟಿದ್ದಾರೆ. ದೂರಿನ ಆಧಾರದ ಮೇರೆಗೆ ಆರೋಪಿಗಳ ವಿರುದ್ಧ ಕೆ.ಆರ್.ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *