ಬಾಳೆಹೊನ್ನೂರಿನಲ್ಲಿ ಧರೆಗುರುಳಿದ ಬೃಹತ್ ಮರ- ಟ್ರಾಫಿಕ್ ನಲ್ಲಿ ಸಿಲುಕಿದ ಸಂಸದ

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಜೋರಾಗಿದ್ದು, ಭಾರೀ ಗಾಳಿ ಸಹಿತ ಮಳೆ ಸುರಿಯುತ್ತಿದೆ. ಭಾರೀ ಗಾಳಿಯಿಂದಾಗಿ ಬೃಹತ್ ಮರ ರಸ್ತೆಯಲ್ಲಿ ಬಿದ್ದ ಪರಿಣಾಮ ನೂತನ ಸಂಸದ ತೇಜಸ್ವಿ ಸೂರ್ಯ ಟ್ರಾಫಿಕ್ ಜಾಮ್‍ನಲ್ಲಿ ಪರದಾಡುವಂತಾಯಿತು.

ಬಾಳೆಹೊನ್ನುರು, ಮೂಡಿಗೆರೆ, ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದೆ. ಭಾರೀ ಗಾಳಿಯಿಂದ ಬಾಳೆಹೊನ್ನೂರಿನ ಕಣತಿ ಬಳಿ ಬೃಹತ್ ಮರ ರಸ್ತೆಗೆ ಬಿದ್ದಿದೆ. ಇದರಿಂದ ಬಾಳೆಹೊನ್ನೂರು-ಚಿಕ್ಕಮಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ವೇಳೆ ಶೃಂಗೇರಿಯಿಂದ ಬೇಲೂರು ಕಡೆಗೆ ಹೋಗುತ್ತಿದ್ದ ಸಂಸದ ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿದ್ದಾರೆ.

ಮರ ಬಿದ್ದು ಒಂದು ಗಂಟೆಯಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಸ್ಥಳೀಯರು ಹಾಗೂ ಅರಣ್ಯ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ಮಾಡಿದರು. ಮರ ತೆರವು ಕಾರ್ಯ ಪೂರ್ಣಗೊಂಡ ನಂತರ ತೇಜಸ್ವಿ ಸೂರ್ಯ ಬೇಲೂರಿನ ಕಡೆ ಪಯಣ ಬೆಳೆಸಿದರು.

ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿ ಚಾರ್ಮಾಡಿಯಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದೆ. ಗಾಳಿಯ ರಭಸಕ್ಕೆ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಹಾಗೂ ವಿದ್ಯುತ್ ಕಂಬಗಳು ಧರೆಗೆ ಉರುಳಿದೆ. ಮಳೆಯಿಂದಾಗಿ ರಾತ್ರಿಯಿಡೀ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪ್ರಯಾಣಿಕರು ಸುಮಾರು 4 ಗಂಟೆಗಳ ಕಾಲ ಪರದಾಡಿದರು.

Comments

Leave a Reply

Your email address will not be published. Required fields are marked *