ರಸ್ತೆ ಬದಿ ನಿಂತಿದ್ದ ವೇಳೆ ಓಮ್ನಿ ಕಾರು ಡಿಕ್ಕಿ- ಗ್ರಾಮಪಂಚಾಯ್ತಿ ಸದಸ್ಯ ದುರ್ಮರಣ

ಮಡಿಕೇರಿ: ತಮ್ಮ ಪಾಡಿಗೆ ಸ್ನೇಹಿತರೊಂದಿಗೆ ರಸ್ತೆ ಬದಿ ನಿಂತಿದ್ದ ಗ್ರಾಮಪಂಚಾಯ್ತಿ ಸದಸ್ಯರೊಬ್ಬರಿಗೆ ಏಕಾಏಕಿ ಓಮ್ನಿ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಹರಿಶ್ಚಂದ್ರ ಪುರದಲ್ಲಿ ತಡರಾತ್ರಿ ನಡೆದಿದೆ.

ವಿರಾಜಪೇಟೆ ತಾಲೂಕಿನ ಗೊಣಿಕೊಪ್ಪಲು ಗ್ರಾಮಪಂಚಾಯ್ತಿ ಸದಸ್ಯ ಕಲೀಮುಲ್ಲಾ ಮೃತ ದುರ್ದೈವಿ. ಆರೋಪಿಯನ್ನು ಚಾಲಕ ಬಾಲ ಎಂದು ಗುರುತಿಸಲಾಗಿದೆ. ರಾತ್ರಿ ರಸ್ತೆ ಬದಿಯಲ್ಲಿ ನಿಂತು ಸ್ನೇಹಿತರ ಜೊತೆ ಕಲೀಮುಲ್ಲಾ ಮಾತನಾಡುತ್ತಿದ್ದರು. ಈ ವೇಳೆ ಓಮ್ನಿ ಕಾರೊಂದು ಏಕಾಏಕಿ ಬಂದು ಕಲೀಮುಲ್ಲಾ ಅವರಿಗೆ ಡಿಕ್ಕಿ ಹೊಡೆದಿದೆ. ಘಟನೆಯ ಬಳಿಕ ಕಾರನ್ನು ನಿಲ್ಲಿಸದೆ ಚಾಲಕ ಎಸ್ಕೇಪ್ ಆಗಿದ್ದನು.

ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಕಲೀಮುಲ್ಲಾರನ್ನ ಅವರ ಸ್ನೇಹಿತರು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಲೀಮುಲ್ಲಾ ನಿಧನರಾಗಿದ್ದಾರೆ. ಹಾಗೆಯೇ ಅಪಘಾತ ನಡೆದ ವೇಳೆ ಕಲೀಮುಲ್ಲಾ ಪಕ್ಕದಲ್ಲಿದ್ದ ಮತ್ತೊಬ್ಬ ಸ್ನೇಹಿತ ಕೂಡ ಗಾಯಗೊಂಡಿದ್ದಾರೆ.

ಸದ್ಯ ಈ ಘಟನೆ ಕುರಿತು ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರು ಓಮ್ನಿಯನ್ನು ವಶಕ್ಕೆ ಪಡೆದಿದ್ದು, ಆರೋಪಿಯನ್ನು  ಬಂದಿಸಿ ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *