ತಾಯಿಯ ನಿರೀಕ್ಷೆಯಂತೆ ಸಾಧನೆ ಮಾಡದ್ದಕ್ಕೆ ಬೇಸರ – ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ

ಮೈಸೂರು: ತಾಯಿಯ ನಿರೀಕ್ಷೆಗೆ ತಕ್ಕಂತೆ ಸಾಧನೆ ಮಾಡದ ಹಿನ್ನೆಲೆಯಲ್ಲಿ ಮನನೊಂದು ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಹೂಟಗಳ್ಳಿಯಲ್ಲಿ ನಡೆದಿದೆ.

21 ವರ್ಷದ ಮಾನ್ಯ ಆತ್ಮಹತ್ಯೆಗೆ ಶರಣಾದ ಬಿಕಾಂ ವಿದ್ಯಾರ್ಥಿನಿ. ಗುರುವಾರ ರಾತ್ರಿ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂದು ಬೆಳಗ್ಗೆ ಮಗಳು ರೂಮಿನಿಂದ ಹೊರಬಂದಿಲ್ಲ ಎಂದು ಬಾಗಿಲು ಬಡಿದಿದ್ದಾರೆ. ಆದರೆ ಮಾನ್ಯ ಬಾಗಿಲು ತೆರೆಯಲಿಲ್ಲ. ಕೊನೆಗೆ ಬಾಗಿಲು ಮುರಿದು ರೂಮಿಗೆ ಹೋದಾಗ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ.

ಮೃತ ಮಾನ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‍ನೋಟ್ ಬರೆದಿದ್ದಾರೆ. ಅದರಲ್ಲಿ “ಓದಿನಲ್ಲಿ ತಾಯಿ ಇಟ್ಟಿದ್ದ ನಂಬಿಕೆಯಂತೆ ನಾನು ಸಾಧಿಸಲು ಸಾಧ್ಯವಾಗಿಲ್ಲವೆಂದು” ಬರೆದಿದ್ದಾಳೆ.

ಮಾನ್ಯ ತಾಯಿ ಮಗಳು ತುಂಬಾ ಚೆನ್ನಾಗಿ ಓದಿ ಸಾಧನೆ ಮಾಡುತ್ತಾಳೆ ಎಂದು ನಂಬಿಕೆ ಇಟ್ಟುಕೊಂಡಿದ್ದರಂತೆ. ಮಾನ್ಯ ಚೆನ್ನಾಗಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದರೆ ಪರೀಕ್ಷೆಯಲ್ಲಿ ಅಧಿಕ ಅಂಕವನ್ನು ಗಳಿಸಲು ಸಾಧ್ಯವಾಗಿಲ್ಲ. ಇದರಿಂದ ಅಮ್ಮನ ನಿರೀಕ್ಷೆಗೆ ತಕ್ಕಂತೆ ಸಾಧನೆ ಮಾಡಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *