ರಾಜ್ಯದ ಹಲವೆಡೆ ಗುಡುಗು, ಸಿಡಿಲು ಸಹಿತ ವರುಣನ ಅಬ್ಬರ

ಹಾಸನ/ಮಡಿಕೇರಿ/ಕೋಲಾರ: ರಾಜ್ಯದ ಹಲವೆಡೆ ಗುಡುಗು, ಸಿಡಿಲು ಸಹಿತ ವರುಣ ಅಬ್ಬರಿಸಿದ್ದಾನೆ. ಹಾಸನ ಜಿಲ್ಲೆಯ ವಿವಿಧೆಡೆ ಗುರುವಾರ ಗುಡುಗು ಗಾಳಿ ಸಹಿತ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. ಈ ಮೂಲಕ ಬಿಸಿಲ ಬೇಗೆಯಿಂದ ಬೆಂದಿದ್ದ ಭೂಮಿಗೆ ತಂಪೆರೆದಂತಾಯಿತು. ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು. ವಾಹನ ಸವಾರರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ರಸ್ತೆಗಳಲ್ಲಿ ನೀರು ತುಂಬಿದ್ದರಿಂದ ಅಕ್ಷರಶಃ ಕೆರೆಯೆಂತಾಗಿದ್ದವು. ಮಳೆಯಿಂದಾಗಿ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ. ಈಗಾಗಲೇ ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ. ಹಾಸನ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ ಆರಂಭಗೊಂಡು 15 ದಿನಗಳು ಕಳೆದಿದ್ದರೂ ಮಳೆ ಕೊರತೆಯಿಂದ ರೈತರು ಬಿತ್ತನೆ ಬೀಜ ಖರೀದಿಸಲು ಹಿಂದೇಟು ಹಾಕಿದ್ದರು. ಈಗ ಉತ್ತಮ ಮಳೆಯಾಗಿದ್ದು ಬಿತ್ತನೆ ಕಾರ್ಯ ಚುರುಕುಗೊಳ್ಳಲಿದೆ.

ಮೊತ್ತಂದೆಡೆ ಬರಗಾಲದಿಂದ ಹಾಸನ ಜಿಲ್ಲೆ ತತ್ತರಿಸಿದ್ದು ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಳೆದ ವರ್ಷ ಮೇ ತಿಂಗಳ ಅಂತ್ಯದ ವೇಳೆಗೆ ಜಿಲ್ಲೆಯ ಜೀವನದಿ ಹೇಮಾವತಿ ಭರ್ತಿಯಾಗಿತ್ತು. ಈ ಬಾರಿ ಹೇಮಾವತಿ ಬರಿದಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದಲ್ಲಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ನೀರಿನ ಸಮಸ್ಯೆ ಎದುರಾಗಲಿದೆ.

ಕೊಡಗು ಜಿಲ್ಲೆಯ ಕೆಲವೆಡೆ ವರುಣನ ಅಬ್ಬರ ಜೋರಾಗಿತ್ತು. ಗುಡುಗು ಸಿಡಿಲಿನೊಂದಿಗೆ ವರುಣ ಅಬ್ಬರಿಸಿದ್ದಾನೆ. ದಿಢೀರ್ ಆಗಿ ಸುರಿದ ಮಳೆಗೆ ದ್ವಿಚಕ್ರ ವಾಹನ ಸವಾರರ ಪರದಾಡುವಂತಾಯಿತು. ಮಡಿಕೇರಿ ನಗರ ಸೇರಿದಂತೆ ವಿವಿಧೆಡೆ ವರುಣನ ಅಬ್ಬರ ಜೋರಾಗಿತ್ತು.

ಕೋಲಾರದಲ್ಲಿ ಮಾಲೂರು ಭಾಗದಲ್ಲಿ ಗಾಳಿ ಸಹಿತ ಭರ್ಜರಿ ಮಳೆ ಆಗಿದೆ. ಬಾರಿ ಗಾಳಿಗೆ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಅಲ್ಲದೆ ವಾಹನ ಸವಾರರು ಕೂಡ ಪರದಾಡುವಂತಾಯಿತು.

Comments

Leave a Reply

Your email address will not be published. Required fields are marked *