ಕೆಜಿಎಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ನರಳಾಡಿ ಮಗು ಕಳೆದುಕೊಂಡ ತಾಯಿ!

ಕೋಲಾರ: ಇಲ್ಲಿನ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ನರಳಾಡಿ ಮಗುವನ್ನ ಕಳೆದುಕೊಂಡ ಅಮಾನವೀಯ ಘಟನೆ ನಡೆದಿದೆ.

ಹೌದು. ಸೋಮವಾರ ಮಧ್ಯಾಹ್ನ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 8ನೇ ಬ್ಲಾಕ್‍ನ ರಿಯಾಜ್ ಎಂಬವರ ಪತ್ನಿ ಸಮೀನಾ ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಆದರೆ ಅಲ್ಲಿ ಆಕೆ ನರಳಾಡಿದರೂ ವೈದ್ಯರಾಗಲಿ, ಸಿಬ್ಬಂದಿಯಾಗಲಿ ಯಾರೂ ಕೇಳಿರಲಿಲ್ಲ. ಮಹಿಳೆಗೆ ಚಿಕಿತ್ಸೆ ನೀಡದೆ ವೈದ್ಯರು ಕೂಡ ದುರಹಂಕಾರದ ವರ್ತನೆ ತೋರಿಸಿದ್ದರು. ನಂತರ ಸಂಜೆ 5 ಗಂಟೆ ಸುಮಾರಿಗೆ ಆಸ್ಪತ್ರೆ ಸರ್ಜನ್ ಶಿವಕುಮಾರ್, ಸ್ಥಳಕ್ಕೆ ಧಾವಿಸಿ ಅಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.

ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡದ ಕೆಜಿಎಫ್ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ವರ್ತನೆಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಚಿಕಿತ್ಸೆ ತಡವಾದ ಹಿನ್ನೆಲೆಯಲ್ಲಿ ಹೊಟ್ಟೆಯಲ್ಲೇ ಗಂಡು ಮಗು ಸಾವನ್ನಪ್ಪಿದೆ. ನಮಗಾದ ನೋವು ಸಂಕಟ ಬೇರಯವರಿಗೆ ಆಗುವುದು ಬೇಡ. ಇನ್ನಾದರೂ ಆಸ್ಪತ್ರೆಯಲ್ಲಿ ಸರಿಯಾದ ವೈದ್ಯರು, ಸಿಬ್ಬಂದಿಯನ್ನ ನೇಮಕ ಮಾಡಲಿ ಎಂದು ಸಮೀನಾ ಪೋಷಕರು ಒತ್ತಾಯಿಸಿದ್ದಾರೆ.

7 ತಿಂಗಳ ಹೆರಿಗೆ ನೋವಿನಿಂದ ಆಸ್ಪತ್ರೆಯಲ್ಲೇ ಬಿದ್ದು ಗರ್ಭಿಣಿ ಮಹಿಳೆ ನರಳಾಡುತ್ತಿರುವ ವಿಡಿಯೋ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೆಜಿಎಫ್ ಆಸ್ಪತ್ರೆಯಿಂದ, ಜಿಲ್ಲಾಸ್ಪತ್ರೆಗೆ ಅದಾದ ಬಳಿಕ ಗರ್ಭಿಣಿ ಮಹಿಳೆಯನ್ನು ರಾತ್ರಿಯೇ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಹೊಟ್ಟೆಯಲ್ಲಿಯೇ ಗಂಡು ಮಗು ಸಾವನ್ನಪ್ಪಿದೆ.

ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ವಿರುದ್ಧ ಕ್ರಮಕೈಗೊಳ್ಳುವಂತೆ ಸಂಬಂಧಿಕರು ಒತ್ತಾಯಿಸಿದ್ದಾರೆ. ಅಲ್ಲದೆ ತಾಯಿ ಸಮೀನಾ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಇಷ್ಟಾದ್ರೂ ಯಾವೊಬ್ಬ ಆರೋಗ್ಯ ಇಲಾಖೆ ಅಧಿಕಾರಿಗಳಾಗಲಿ, ಜಿಲ್ಲಾ ಆರೋಗ್ಯಾಧಿಕಾರಿಗಳಾಗಲಿ ಸ್ಥಳಕ್ಕೆ ಬಂದಿಲ್ಲ. ತಾಯಿಯ ಆರೋಗ್ಯ ವಿಚಾರಿಸಿಲ್ಲ ಎಂದು ಸಮೀನಾ ಸಂಬಂಧಿಕರು ಆರೋಪಿಸಿದ್ದಾರೆ.

ಇಷ್ಟು ಮಾತ್ರವಲ್ಲದೇ ಸೊಮವಾರ ಬೆಳಗ್ಗೆ ಇದೇ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಕೆಜಿಎಫ್ ನಗರದ ನಿವಾಸಿ ದಿಲೀಪ್ (31) ಎಂಬಾತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾನೆ. ಘಟನೆ ಖಂಡಿಸಿ ಪೋಷಕರು ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಎರಡು ವಿಷಯಗಳು ತಿಳಿಯುತ್ತಿದ್ದಂತೆ ಕೆಜಿಎಫ್ ಶಾಸಕಿ ರೂಪ ಶಶಿಧರ್ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಮಾತುಕತೆ ನಡೆಸಿ ಆಸ್ಪತ್ರೆ ಪರಿಶೀಲನೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *