ಮಗಳ ಮದುವೆಯಲ್ಲಿ ಹಾಡುತ್ತಲೇ ಕುಸಿದು ಬಿದ್ದು ಜೀವಬಿಟ್ಟ ತಂದೆ – ವಿಡಿಯೋ

ತಿರುವನಂತಪುರ: ಸಂಭ್ರಮದಿಂದ ಕೂಡಿದ್ದ ಮದುವೆ ಮನೆಯಲ್ಲಿ ಮಧುವಿನ ತಂದೆ ಹಾಡುತ್ತಲೇ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.

ಪಿ ವಿಷ್ಣು ಪ್ರಸಾದ್ (55) ಸಾವನ್ನಪ್ಪಿದ್ದು, ಅವರು ತಿರುವನಂತಪುರಂನಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ವಿಷ್ಣು ಪ್ರಸಾದ್ ಅವರ ಕಿರಿಯ ಮಗಳ ವಿವಾಹ ಕಾರ್ಯಕ್ರಮ ಶನಿವಾರ ನಡೆಯುತಿತ್ತು. ಈ ವೇಳೆ ಸಂಭ್ರಮದಿಂದಲೇ ವೇದಿಕೆ ಮೇಲೆ ತೆರಳಿದ್ದ ಪ್ರಸಾದ್ ಅವರು ಹಾಡು ಹಾಡುತ್ತಿದ್ದರು. ಆದರೆ ಕ್ಷಣಮಾತ್ರದಲ್ಲಿ ಇದಕ್ಕಿದ್ದಂತೆ ವೇದಿಕೆ ಮೇಲೆ ಕುಸಿದು ಬಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡುವ ಪ್ರಯತ್ನ ವಿಫಲವಾಗಿತ್ತು.

ಕೊಲ್ಲಂನಲ್ಲಿ ಶನಿವಾರ ಮದುವೆ ಕಾರ್ಯಕ್ರಮದ ವೇಳೆ ಘಟನೆ ನಡೆದಿದ್ದು, ಮದುವೆಯಲ್ಲಿ ಮಗಳಿಗಾಗಿಯೇ ಮಲೆಯಾಳಂ ಹಾಡೊಂದನ್ನು ಆರ್ಪಿಸಿ ಹಾಡುತ್ತಿದ್ದರು. ಪೊಲೀಸರು ನೀಡಿರುವ ಮಾಹಿತಿ ಅನ್ವಯ ಪ್ರಸಾದ್ ಅವರು ಆಸ್ಪತ್ರೆಗೆ ಕರೆತರುವ ಮುನ್ನವೇ ಸಾವನ್ನಪ್ಪಿದ್ದರು.

ತಂದೆಯ ಸಾವಿನ ಸುದ್ದಿಯನ್ನ ಮಗಳಿಗೆ ತಿಳಿಸಿದರೆ ಮದುವೆ ಕಾರ್ಯಕ್ರಮ ಎಲ್ಲಿ ನಿಂತು ಹೋಗುತ್ತದೆ ಎಂದು ಭಯಪಟ್ಟ ಕುಟುಂಬಸ್ಥರು ಮಗಳಿಗೆ ತಿಳಿಸದೆಯೇ ಮದುವೆ ಕಾರ್ಯಕ್ರಮ ನಡೆಸಿದ್ದಾರೆ. ಮಗಳು ತಂದೆಯ ಆರೋಗ್ಯ ಬಗ್ಗೆ ವಿಚಾರಿಸಿದ್ದು, ಈ ವೇಳೆ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರವೇ ಮದುವೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ತಿಳಿ ಹೇಳಿದ್ದಾರೆ. ಆ ಮೂಲಕ ವಿಷ್ಣುಪ್ರಸಾದ್ ಅವರ ಆಸೆಯನ್ನ ಪೂರ್ತಿಗೊಳಿಸಿದ್ದಾರೆ.

ತಂದೆಯ ಹೆಸರು ಹೊಂದಿರುವ ವರನನ್ನೇ ವಿಷ್ಣು ಪ್ರಸಾದ್ ಅವರ ಪುತ್ರಿ ವಿವಾಹವಾಗಿದ್ದು, ಭಾನುವಾರ ಮದುವೆ ಕಾರ್ಯಕ್ರಮ ನಡೆದ ಬಳಿಕ ಸೋಮವಾರ ವಿಷ್ಣುಪ್ರಸಾದ್ ಅವರ ಅಂತಿಮ ಸಂಸ್ಕಾರ ನಡೆಸಲಾಗಿದೆ. ವಿಷ್ಣು ಪ್ರಸಾದ್ ಅವರು ತಿರುವನಂತಪುರಂನ ಕರಮನ ಪೊಲೀಸ್ ಠಾಣೆಯಲ್ಲಿ ಎಸ್‍ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ನಿವೃತ್ತಿಗೆ ಒಂದು ವರ್ಷ ಮಾತ್ರ ಬಾಕಿ ಇತ್ತು ಎಂಬ ಮಾಹಿತಿ ಲಭಿಸಿದೆ. ಪೊಲೀಸ್ ಅಧಿಕಾರಿಯ ಸಾವಿಗೆ ಕೇರಳ ಸಿಎಂ ಪಿಣಾರಾಯಿ ವಿಜಯನ್ ಅವರು ಕೂಡ ಸಂತಾಪ ಸೂಚಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *