ಈ ಟ್ರೇಲರ್‌ನಲ್ಲಿ 2 ವಿಲನ್ ಮಾತ್ರ ಫೋಕಸ್, ಮೇ 23ಕ್ಕೆ ಫಿಲ್ಮ್ ರಿಲೀಸ್ – ಆರ್. ಅಶೋಕ್ ವ್ಯಂಗ್ಯ

ಬೆಂಗಳೂರು: ಇಂದು ರೋಷನ್ ಬೇಗ್ ಹೊಸ ಸಿನಿಮಾ ಟೀಸರ್ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಎರಡು ವಿಲನ್ ಗಳನ್ನು ಫೋಕಸ್ ಮಾಡಿದ್ದಾರೆ. ಕಾಂಗ್ರೆಸ್ಸಿನಲ್ಲಿ ಹೀರೋಗಳೇ ಇಲ್ಲ. ಅಲ್ಲಿ ಬರೀ ವಿಲನ್‍ಗಳು, ಕಾಮಿಡಿಯನ್‍ಗಳೇ ಇದ್ದಾರೆ ಎಂದು ಬಿಜೆಪಿ ಶಾಸಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ವಿರುದ್ಧ ಕೈ ಶಾಸಕ ರೋಷನ್ ಬೇಗ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಂದು ಹೊಸ ಸಿನಿಮಾ ಟೀಸರ್ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಎರಡು ವಿಲನ್ ಗಳನ್ನು ಈಗ ಫೋಕಸ್ ಮಾಡಿದ್ದಾರೆ. ಮೈನ್ ವಿಲನ್ ಸಿದ್ದರಾಮಯ್ಯ, ಸಬ್ ವಿಲನ್ ದಿನೇಶ್ ಗುಂಡೂರಾವ್ ಹಾಗೂ ಕೆ.ಸಿ. ವೇಣುಗೋಪಾಲ್ ಕಾಮಿಡಿಯನ್. 23ರ ನಂತರ ಮುಖ್ಯ ಫಿಲ್ಮ್ ರಿಲೀಸ್ ಅಗಲಿದೆ. ಆಗ ಎಷ್ಟು ಜನ ವಿಲನ್ ಗಳು ಬರುತ್ತಾರೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಹೀರೋಗಳು ಇಲ್ಲ, ಬರೀ ವಿಲನ್ ಗಳು, ಕಾಮಿಡಿಯನ್ ಗಳು ಮಾತ್ರ ಇದ್ದಾರೆ ಎಂದು ಕೈ ನಾಯಕರಿಗೆ ಟಾಂಗ್ ನೀಡಿದರು. ಇದನ್ನೂ ಓದಿ:ಸಿದ್ದರಾಮಯ್ಯಗೆ ಅಹಂಕಾರ, ಒಡೆದು ಆಳಿದ್ದಕ್ಕೆ ಕಾಂಗ್ರೆಸ್ಸಿಗೆ ಈ ಸ್ಥಿತಿ ಬಂದಿದೆ – ರೋಷನ್ ಬೇಗ್ ಕಿಡಿ

ಮೇ 23 ಬಿಜೆಪಿಗೆ ಸಂಭ್ರಮದ ದಿನ. ಕಾಂಗ್ರೆಸ್ಸಿನವರಿಗೆ ರೆಸಾರ್ಟ್ ಕಡೆ ಓಡೋ ದಿನ. ಕಾಂಗ್ರೆಸ್ ನಡೆ ರೆಸಾರ್ಟ್ ಗೆ ಓಡುವ ಕಡೆ ಆಗಲಿದೆ. ಇವತ್ತು ರೋಷನ್ ಬೇಗ್ ಸ್ಯಾಂಪಲ್ ಬಿಡುಗಡೆ ಮಾಡಿದ್ದಾರೆ. ಬಳ್ಳಾರಿ, ಬೆಳಗಾವಿಯ ಫಿಲ್ಮ್ ಗಳು ಇನ್ನೂ ರಿಲೀಸ್ ಆಗುವುದು ಬಾಕಿ ಇವೆ. ಮಂಡ್ಯ, ತುಮಕೂರಿನ ರಿಸಲ್ಟ್ ಮೇಲೆ ಸಮ್ಮಿಶ್ರ ಸರ್ಕಾರದ ಭವಿಷ್ಯ ನಿಂತಿದೆ ಎಂದು ವ್ಯಂಗ್ಯವಾಡಿದರು.

23ಕ್ಕೆ ಲಾವಾರಸ ಉಕ್ಕಿ ಯಾರ ಮೇಲೆ ಹರಿಯುತ್ತದೋ ಗೊತ್ತಿಲ್ಲ. ಭೂಕಂಪ ಆಗಿ ಕಾಂಗ್ರೆಸ್ ಮನೆ ಬಿದ್ದು ಹೋಗಲಿದೆ. ಕಾಂಗ್ರೆಸ್ಸಿನವರೇ ಈ ಫಿಲ್ಮ್ ಪ್ರೊಡ್ಯೂಸರ್ ಗಳಾಗಿದ್ದು, 23 ರಂದು ಈ ಸರ್ಕಾರ ಸತ್ತು ಹೋಗುತ್ತದೆ ಎಂದು ಡಾಕ್ಟರ್ ಘೋಷಣೆ ಮಾಡಲಿದ್ದಾರೆ. ಕೇವಲ ರೋಷನ್ ಬೇಗ್ ಒಬ್ಬರ ಪ್ರಶ್ನೆ ಅಲ್ಲ, ಅನೇಕ ಜನ ದಾರಿ ಹುಡುಕುತ್ತಿದ್ದಾರೆ. ದಾರಿ ಯಾವುದಯ್ಯಾ ಎಂದು ಹುಡುಕುತ್ತಿರುವವರಿಗೆ ಬಿಜೆಪಿ ದಾರಿ ತೋರಿಸಲಿದೆ ಎಂದು ಕೈ ನಾಯಕರನ್ನು ಗೇಲಿ ಮಾಡಿದರು.

https://www.youtube.com/watch?v=7ISeRQjsDZk

Comments

Leave a Reply

Your email address will not be published. Required fields are marked *