ಸಿದ್ದರಾಮಯ್ಯಗೆ ಅಹಂಕಾರ, ಒಡೆದು ಆಳಿದ್ದಕ್ಕೆ ಕಾಂಗ್ರೆಸ್ಸಿಗೆ ಈ ಸ್ಥಿತಿ ಬಂದಿದೆ – ರೋಷನ್ ಬೇಗ್ ಕಿಡಿ

– ಎಕ್ಸಿಟ್ ಪೋಲ್‍ನಂತೆ ರಿಸಲ್ಟ್ ಬಂದ್ರೆ ಸಿದ್ದರಾಮಯ್ಯ, ಗುಂಡೂರಾವ್ ಕಾರಣ
– ಮರ್ಯಾದೆ ಇದ್ರೆ ದಿನೇಶ್ ರಾಜೀನಾಮೆ ನೀಡಲಿ

ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಯಂತೆ ಫಲಿತಾಂಶ ಬಂದರೆ ಅದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೇ ಕಾರಣ ಎಂದು ಶಿವಾಜಿನಗರ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯ ಹಾಗೂ ನಮ್ಮ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ಲಾಪ್ ಶೋ ದಿನೇಶ್ ಗುಂಡೂರಾವ್ ಅವರು ಸೇರಿ ಈ ಗತಿಗೆ ತಂದಿದ್ದಾರಲ್ಲ. ಎಕ್ಸಿಟ್ ಪೋಲ್ ನೋಡಿದರೆ ನನಗೆ ಬೇಸರವಾಗುತ್ತದೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.

ಸಿಎಲ್‍ಪಿ ನಾಯಕರು ನಡೆದುಕೊಂಡ ರೀತಿ, ಅಹಂಕಾರ, ದುರಾಹಂಕಾರ ಸರಿಯಲ್ಲ. ಕುಮಾರಸ್ವಾಮಿ, ದೇವೇಗೌಡರ ಮನೆ ಬಾಗಿಲಿಗೆ ಹೋಗಿ ನಾವು ನಿಮ್ಮ ಜೊತೆಗೆ ಸರ್ಕಾರ ಮಾಡೋಣ ಎಂದು ಹೇಳಿ, ನಾನೇ ಸಿಎಂ ಆಗುತ್ತೇನೆ ಎಂದು ಹೇಳಿದ್ದು ಎಲ್ಲರಿಗೂ ಇಷ್ಟ ಆಗಿಲ್ಲ. ನಿಮ್ಮ ನಡತೆ ನೋಡಿ ಜನರಿಗೆ ಗೊಂದಲ ಹಾಗೂ ಬೇಜಾರಾಗಿದೆ ಎಂದರು.

ಕಾಂಗ್ರೆಸ್ ಅಲ್ಪಸಂಖ್ಯಾತರ ಪರ ಕೆಲಸ ಮಾಡುತ್ತಿಲ್ಲ. ಕ್ರಿಶ್ಚಿಯನ್ನರಿಗೆ ಟಿಕೆಟ್ ಕೊಟ್ಟಿಲ್ಲ ಅದಕ್ಕೆ ಬೇರೆ ಕಾರಣ ಇದೆ. ನಮ್ಮ ಅಧ್ಯಕ್ಷರ ವಿರುದ್ಧ ನನಗೆ ಬೇಜಾರಿದೆ. ಇವತ್ತಿನ ರಾಜ್ಯ ಕಾಂಗ್ರೆಸ್ಸಿಗೆ ಈ ದುಸ್ಥಿತಿ ಬರಲು ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯ ಅವರೇ ಕಾರಣ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.

ಬಿಜೆಪಿ ಸೇರುವ ಬಗ್ಗೆ ಬಗ್ಗೆ ಯೋಚನೆ ಮಾಡಿಲ್ಲ. ಅದರ ಬಗ್ಗೆ ಮುಂದೆ ಯೋಚನೆ ಮಾಡುತ್ತೇನೆ. ಇದು ಕಾಂಗ್ರೆಸ್ ಪಾರ್ಟಿ ಇದು ಸಿದ್ದರಾಮಯ್ಯ ಪಾರ್ಟಿ. ಸಿದ್ದರಾಮಯ್ಯ ಒಡೆದು ಆಳೋ ನೀತಿ ಮಾಡುತ್ತಿದ್ದಾರೆ. ಬಹಳ ದೊಡ್ಡ ಸಮುದಾಯ ಒಡೆದಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಗೆ ಈ ಸ್ಥಿತಿ ಬಂದಿದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ತುಳಿಯುತ್ತಿದೆ. ಇದು ಸಿದ್ದರಾಮಯ್ಯ ಕುತಂತ್ರವಾಗಿದೆ. ಕಾಂಗ್ರೆಸ್ ಮುಸ್ಲಿಮರನ್ನು ಮತಬ್ಯಾಂಕಾಗಿ ಮಾತ್ರ ಬಳಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಎಲೆಕ್ಷನ್ ನಲ್ಲಿ ಮುಸ್ಲಿಮರನ್ನು ಕ್ಯಾರೆ ಅನ್ನಲಿಲ್ಲ. ದಿನೇಶ್ ಗುಂಡೂರಾವ್‍ಗೆ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ ಎಂದು ಸವಾಲೆಸೆದಿದ್ದಾರೆ.

Comments

Leave a Reply

Your email address will not be published. Required fields are marked *