ವರದಕ್ಷಿಣೆಗಾಗಿ ಗರ್ಭಿಣಿಗೆ ಬೆಂಕಿ ಹಚ್ಚಿ, ಕೊಲೆಗೆ ಯತ್ನಿಸಿದ ಪತಿ

ದಾವಣಗೆರೆ: ವರದಕ್ಷಿಣೆ ಕಿರುಕುಳ ನೀಡಿ ಗರ್ಭಿಣಿಗೆ ಪತಿ ಹಾಗೂ ಮನೆಯವರು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಭರಮಸಾಗರ ಸಮೀಪದ ಪಾಮ್ರಹಳ್ಳಿ ಗ್ರಾಮದ ನಿವಾಸಿ ಮಹೆರೂನಬಿ (20) ಗಂಭೀರ ಗಾಯಗೊಂಡಿದ್ದಾರೆ. ಪತಿ ರಾಜ್ ಭಕ್ಷಿ ಹಾಗೂ ಕುಟುಂಬಸ್ಥರು ಕೊಲೆಗೆ ಯತ್ನಿಸಿದ್ದು ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮಹೆರೂನಬಿ ತಮ್ಮ ಗ್ರಾಮದ ರಾಜ್ ಭಕ್ಷಿ ಜೊತೆಗೆ 8 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದು, ಆರು ತಿಂಗಳ ಗರ್ಭಿಣಿಯಾಗಿದ್ದಾರೆ. ವರದಕ್ಷಿಣೆ ತರುವಂತೆ ಮಹೆರೂನಬಿ ಅವರಿಗೆ ರಾಜ್ ಭಕ್ಷಿ ಹಾಗೂ ಕುಟುಂಬಸ್ಥರು ನಿರಂತರ ಕಿರುಕುಳ ನೀಡುತ್ತಿದ್ದರು. ಈ ಸಂಬಂಧ ಇಂದು ಪತಿ, ಅತ್ತೆ ಹಾಗೂ ನಾದಿನಿ ಸೇರಿ ಮಹೆರೂನಬಿ ಅವರಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ, ಕೊಲೆಗೆ ಯತ್ನಿಸಿದ್ದಾರೆ.

ಮಹೆರೂನಬಿ ದೇಹದ ಮೇಲೆ ಶೇ.60ರಷ್ಟು ಸುಟ್ಟ ಗಾಯಗಳಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇತ್ತ ಆಸ್ಪತ್ರೆಯ ಮುಂಭಾಗದಲ್ಲಿ ಸಂತ್ರಸ್ತೆಯ ಸಂಬಂಧಿಕರು ರಾಜ್ ಭಕ್ಷಿ ಸಂಬಂಧಿಕರು ಕೈ ಕೈ ಮಿಲಾಯಿಸಿದ್ದಾರೆ.

ಮಹೆರೂನಬಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗೆ ಹಾಗೂ ಕೃತ್ಯಕ್ಕೆ ಸಹಾಯ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *