ಏಕಾಂಗಿಯಾದ್ರಾ ರಮೇಶ್ ಜಾರಕಿಹೊಳಿ?

– ರಮೇಶ್ ಜಾರಕಿಹೊಳಿ ಭೇಟಿಯಾದ ಸಿಪಿ ಯೋಗೀಶ್ವರ್

ಬೆಂಗಳೂರು: ಕಾಂಗ್ರೆಸ್ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಅವರು ಏಕಾಂಗಿಯಾದರೇ ಎನ್ನುವ ಪ್ರಶ್ನೆ ಎದ್ದಿದೆ.

ರಮೇಶ್ ಜಾರಕಿಹೊಳಿ ಅವರು ಬೆಳಗಾವಿಯಿಂದ ಬೆಂಗಳೂರಿಗೆ ಸೋಮವಾರ ತಡರಾತ್ರಿ ವಾಪಸ್ ಬಂದಿದ್ದಾರೆ. ಆದರೆ ಮನೆ ಬಿಟ್ಟು ಹೊರ ಬರುತ್ತಿಲ್ಲ. ಕಳೆದ ವಾರ ಸಂಸದ ಬಿ.ವಿ ನಾಯಕ್ ಅವರು ಮನವೊಲಿಸಲು ಬಂದಿದ್ದರು. ಆದರೆ ಈಗ ಶಾಸಕ ನಾಗೇಂದ್ರ ಸೇರಿದಂತೆ ಕಾಂಗ್ರೆಸ್‍ನ ಯಾವುದೇ ಶಾಸಕರು ರಮೇಶ್ ಜಾರಕಿಹೊಳಿ ಅವರನ್ನು ಭೇಟಿಗೆ ಹೋಗಿಲ್ಲ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇತ್ತ ಮಾಜಿ ಸಚಿವರಿಗೆ ಕಾಂಗ್ರೆಸ್ ಪಕ್ಷದಲ್ಲೂ ಬೆಲೆ ಸಿಗುತ್ತಿಲ್ಲ. ಅತ್ತ ಬಿಜೆಪಿಗೆ ಹೋಗಲಾಗದೇ ಇಕ್ಕಟ್ಟಿಗೆ ಸಿಲುಕಿದರಾ? ಏಕಾಂಗಿಯಾಗಿ ಮನೆಯಲ್ಲೇ ಕುಳಿತು ಹೊಸ ಪ್ಲಾನ್ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. ಈ ನಡುವೆ ಬೆಂಗಳೂರಿನ ರಮೇಶ್ ಜಾರಕಿಹೊಳಿಯವರ ಸರ್ಕಾರಿ ನಿವಾಸಕ್ಕೆ ಬಿಜೆಪಿ ಮುಖಂಡ ಸಿ.ಪಿ.ಯೋಗೀಶ್ವರ್ ಅವರು ಭೇಟಿ ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಮೇಶ್ ಜಾರಕಿಹೊಳಿಗೆ ಕರೆ ಮಾಡಿ ತುರ್ತಾಗಿ ಬೆಂಗಳೂರಿಗೆ ಬರುವಂತೆ ಹೇಳಿದ್ದರು. ಒಂದು ಫೋನ್ ಕರೆ ಬಂದಿದ್ದಕ್ಕೆ ಕೊನೆ ಘಳಿಗೆಯಲ್ಲಿ ವಿಮಾನದ ಟಿಕೆಟ್ ಬುಕ್ ಮಾಡಿ ಪುತ್ರ ಅಮರ್ ಜೊತೆ ಬೆಂಗಳೂರಿಗೆ ಬಂದಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ವಾಗ್ದಾಳಿ ಹಿನ್ನೆಲೆಯಲ್ಲಿ ಇದನ್ನೇ ಲಾಭವಾಗಿ ಬಳಸಿಕೊಳ್ಳಲು ರಮೇಶ್ ಮುಂದಾಗಿದ್ದು, ರೆಬೆಲ್ ಶಾಸಕರನ್ನು ಒಟ್ಟುಗೂಡಿಸುವ ಕೆಲಸ ಮಾಡಲಿದ್ದಾರೆ. ಅಲ್ಲದೆ ಬೆಂಬಲಿಗರಿಗೆ ಹೊಸ ಸಂದೇಶ ತರುವುದಾಗಿ ಹೇಳಿ ಜಾರಕಿಹೊಳಿ ಬೆಂಗಳೂರಿಗೆ ಬಂದಿದ್ದಾರೆ ಎಂಬುದಾಗಿ ಅವರ ಆಪ್ತರಿಂದ ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *