ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಅಕ್ರಮ ಫಿಲ್ಟರ್ ಮರಳು ದಂಧೆಗೆ ಬ್ರೇಕ್

ಕೊಪ್ಪಳ: ಜಿಲ್ಲೆಯಲ್ಲಿ ಅಕ್ರಮ ಮರಳು ಫಿಲ್ಟರ್ ಅಡ್ಡೆ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮೂಲಕ ಸುದ್ದಿ ಬಿತ್ತರಿಸಿತ್ತು. ನಾಯಿ ಕೊಡೆಗಳಂತೆ ಎಲ್ಲೆಂದರಲ್ಲಿ ಆಕ್ರಮ ಮರಳು ಫಿಲ್ಟರ್ ದಂಧೆ ಎಗ್ಗಿಲ್ಲದೆ ಸಾಗಿತ್ತು. ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು ಅಕ್ರಮ ಮರಳು ಫಿಲ್ಟರ್ ಅಡ್ಡೆಯ ಮೇಲೆ ದಾಳಿ ನೆಡಸಿದ್ದಾರೆ.

ಗಂಗಾವತಿ ತಾಲೂಕಿನಾದ್ಯಂತ ಕೆರೆ, ಹಳ್ಳ-ಕೊಳ್ಳಗಳಲ್ಲಿ ಅಕ್ರಮ ಮರಳು ದಂಧೆ ರಾಜಾರೋಷವಾಗಿ ನೆಡದಿತ್ತು. ಇಂದು ಕೊಪ್ಪಳ ಎಸಿ ಸಿ.ಡಿ.ಗೀತಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಮರಳು ಫಿಲ್ಟರ್ ಅಡ್ಡೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಗಂಗಾವತಿಯಲ್ಲಿ ಸಿಗುವ ಮಣ್ಣು ಮಿಶ್ರಿತ ಮರಳನ್ನು ಫಿಲ್ಟರ್ ಮಾಡಿ ದೂರದ ಬೆಂಗಳೂರು, ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಕಡೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಅಧಿಕಾರಿಗಳು ಸಿದ್ದಿಕೇರಿ ಮತ್ತು ಮಲ್ಲಪುರ ಸೇರಿದಂತೆ ನಾಲ್ಕಾರು ಅಡ್ಡೆಗಳ ಮೇಲೆ ದಾಳಿ ಮಾಡಿ ಫಿಲ್ಟರ್ ಮರಳನ್ನು ಮತ್ತು ಮರಳಿಗೆ ಬಳಸುತ್ತಿದ್ದ ಕೆರೆಯ ಮಣ್ಣನ್ನು ವಶಕ್ಕೆ ಪಡೆದಿದ್ದಾರೆ.

ಫಿಲ್ಟರ್ ಮರಳು ದಂಧೆ ನಡೆಸುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿಕೊಳ್ಳುವಂತೆ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ. ಹೊಸ ಮನೆಗಳ ಕಟ್ಟುತ್ತಿರುವವರು ಫಿಲ್ಟರ್ ಮರಳು ಕಂಡು ಬಂದಲ್ಲಿ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸಾರ್ವಜನಿಕರಲ್ಲಿ ಎಸಿ ಸಿ.ಡಿ.ಗೀತಾ ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *