ರಾಹುಲ್ ಗಾಂಧಿ ಮದ್ವೆಯಾಗಲ್ಲ, ಸಿದ್ದರಾಮಯ್ಯ ಸಿಎಂ ಆಗಲ್ಲ: ಕೆ.ಎಸ್.ಈಶ್ವರಪ್ಪ

ಧಾರವಾಡ: ಸಿದ್ದರಾಮಯ್ಯ ಸಿಎಂ ಆಗಬೇಕು ಅಂತ ಕೂಗು ಎದ್ದಿರೋ ಬೆನ್ನಲ್ಲೇ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಮೂರ್ನಾಲ್ಕು ಜನ ನಾಯಕರ ಬಾಯಿಂದ ಸಿಎಂ ಆಗಬೇಕು ಅಂತ ಸಿದ್ದರಾಮಯ್ಯ ಹೇಳಿಕೆ ಕೊಡಿಸಿದ್ದಾರೆ. ಈ ಜನ್ಮದಲ್ಲಿ ರಾಹುಲ್ ಗಾಂಧಿ ಮದ್ವೆಯಾಗಲ್ಲ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲ್ಲ ಅಂತ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಭಿಕ್ಷುಕನಂತೆ ಕನಸು ಕಾಣುತ್ತಿದ್ದಾರೆ. ಮೂರು ನಾಲ್ಕು ಜನ ನಾಯಕರ ಬಾಯಿಂದ ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಹೇಳಿಕೆ ಕೊಡಿಸುತ್ತಿದ್ದಾರೆ. ಈ ರೀತಿ ಹೇಳಿಕೆ ನೀಡಬಾರದೆಂದು ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್ ಹೇಳಿದ್ರೂ ಕೂಡಾ ಚರ್ಚೆ ನಡೆಸುತ್ತಿದ್ದಾರೆ. ಕಾಂಗ್ರೆಸ್‍ನ ಒಳ ಬೇಗುದಿ ಉಪಚುನಾವಣೆ ಬಳಿಕ ಸ್ಫೋಟವಾಗುತ್ತದೆ. ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಸಿಎಂ ಚರ್ಚೆ ಬಗ್ಗೆ ಗರಂ ಆಗಿದ್ದಾರೆ. ನಾಡಿನ ಜನತೆ ತಿರಸ್ಕಾರ ಮಾಡಿದ ಎರಡು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಿವೆ. ಇವರಿಗೆ ರಾಜ್ಯದ ಜನ ಮೆಚ್ಚುತ್ತಿಲ್ಲ. ಇನ್ನು ಒಳ ಒಪ್ಪಂದಕ್ಕೂ ಸಿದ್ದರಾಮಯ್ಯಗೂ ಏನೋ ಸಂಬಂಧವಿದೆ. ಈ ಹಿಂದೆ ಒಳ ಒಪ್ಪಂದದಿಂದ ಪರಮೇಶ್ವರ್ ಅವರನ್ನ ಸೋಲಿಸಿದ್ರು, ಅದೇ ಒಪ್ಪಂದ ರೀತಿಯಲ್ಲಿ ಪರಮೇಶ್ವರ್ ಹಾಗೂ ದೇವೆಗೌಡರು ಸೇರಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ರು ಎಂದು ಈಶ್ವರಪ್ಪ ಆರೋಪಿಸಿದರು.

ಜೆಡಿಎಸ್ ಹಾಗೂ ಕಾಂಗ್ರೆಸ್ ಕುತಂತ್ರ ರಾಜಕಾರಣ ನಮಗೆ ಗೊತ್ತಿಲ್ಲ. ನೇರವಾಗಿ ರಾಜಕಾರಣ ಮಾಡುತ್ತ ಬಂದಿರೊದು ಬಿಜೆಪಿ ಪಕ್ಷ. ಕಾಂಗ್ರೆಸ್ ನಾಯಕರು ನಮ್ಮ ಪ್ರಧಾನಿ ಮತ್ತು ಅಮಿತ್ ಶಾ ಮೇಲೆ ದೂರು ಕೊಡುವುದನ್ನು ಬಿಟ್ಟಿಲ್ಲ. ಶ್ರೀರಾಮಲು ಮೇಲಿನ ದೂರು ಕೂಡ ತಿರಸ್ಕಾರವಾಗುತ್ತದೆ. ಸಿದ್ದರಾಮಯ್ಯ ಬಂಗಾರದ ತಟ್ಟೆ, ಬಂಗಾರದ ಖುರ್ಚಿ ಬಗ್ಗೆ ಕನಸು ಕಾಣುತ್ತಿದ್ದಾರೆ ಎಂದು ಭಿಕ್ಷುಕನ ಕಥೆ ಹೇಳಿ ಸಿದ್ದರಾಮಯ್ಯರನ್ನು ವ್ಯಂಗ್ಯ ಮಾಡಿದರು.

ದೇವೇಗೌಡ್ರು-ಕುಮಾರಸ್ವಾಮಿ ಮೇಲೆ ಸಿದ್ದರಾಮಯ್ಯಗೆ ಈಗಲೂ ದ್ವೇಷವಿದೆ. ಅವರು ಕೀ ಕೊಟ್ಟ ಗೊಂಬೆಗಳು ಮಾತನಾಡುತ್ತಿವೆ ಅಂತ ಬಿಜೆಪಿ ಮುಖಂಡ ಆರ್. ಅಶೋಕ್ ಕೂಡ ಕಾಲೆಳೆದಿದ್ದಾರೆ. ಬಿಜೆಪಿ ಟೀಕೆಯ ನಡುವೆ, ವಿವಾದವನ್ನು ತಣ್ಣಗಾಗಿಸೋ ಯತ್ನವನ್ನು ಮೈತ್ರಿ ಸರ್ಕಾರದ ಸಚಿವರು ಮಾಡಿದ್ದಾರೆ. ಮುಂದೆ ಬಹುಮತ ಬಂದಾಗ ಸಿಎಂ ಆಗೋ ಚರ್ಚೆ ಮಾಡೋಣ ಬಿಡಿ ಅಂತ ಸತೀಶ್ ಜಾರಕಿಹೊಳಿ, ದೇಶಪಾಂಡೆ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *