ಸಿದ್ದರಾಮಯ್ಯರನ್ನ ಮೂಲೆ ಗುಂಪು ಮಾಡುವ ಮಾತೇ ಇಲ್ಲಾ: ಡಿಕೆಶಿ

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು. ನಾವು ಅವರನ್ನು ಮೂಲೆ ಗುಂಪು ಮಾಡುವ ಮಾತೇ ಇಲ್ಲಾ ಎಂದು ಬೃಹತ್ ನೀರಾವರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕುಂದಗೋಳದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಚಿವರು, ನಾವೆಲ್ಲಾ ಸೇರಿ ಸಿದ್ದರಾಮಯ್ಯನವರ ಕೈ ಬಲಪಡಿಸುತ್ತೇವೆ. ಸರ್ಕಾರ ಸುಭದ್ರವಾಗಿದೆ, ಮುಂದೆಯೂ ಇರಲಿದೆ. ರಾಜಕೀಯ ಚದುರಂಗ ಮೇ 23ರ ನಂತರ ಗೊತ್ತಾಗಲಿದೆ ಎಂದು ಬಿಜೆಪಿ ವಿರುದ್ಧ ಗುಡುಗಿದರು.

ಕುಂದಗೋಳದಲ್ಲಿರುವ ಐತಿಹಾಸಿಕ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು, ಪೂಜೆ ಸಲ್ಲಿಸಿದರು. ದೇವಸ್ಥಾನದ ಶಿಲ್ಪ ಕಲೆಯನ್ನು ವೀಕ್ಷಿಸಿದರು. ಬಳಿಕ ಮಾತನಾಡಿದ ಸಚಿವರು, ಈಶ್ವರನ ಆಶೀರ್ವಾದ ಪಡೆದು ನಾವು ಚುನಾವಣೆ ಪ್ರಚಾರವನ್ನು ಆರಂಭಿಸಿದ್ದೇವೆ. ಈ ಚುನಾವಣೆ ನಡೆಯುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಅಲ್ಲ. ಇಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಭ್ಯರ್ಥಿಗಳಲ್ಲ. ಈಗ ನಡೆಯುತ್ತಿರುವುದು ಸಿ.ಎಸ್.ಶಿವಳ್ಳಿಯವರ ಚುನಾವಣೆ. ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿಯವರು ಹೊಸ ಪುಸ್ತಕದಲ್ಲಿ ಹೆಸರು ಬರೆಯಬೇಕು. ಇವತ್ತಿನಿಂದ 18ರವರೆಗೆ ನಮ್ಮ ಕೆಲಸ ನಡೆಯುತ್ತದೆ. ನಮ್ಮ ಪಕ್ಷದ ಜೊತೆಗೆ ನೀವು ಕೈ ಜೋಡಿಸಬೇಕು ಎಂದು ಸ್ಥಳೀಯ ಬಿಜೆಪಿಯ ನಾಯಕರಿಗೆ ಆಹ್ವಾನ ಕೊಡುತ್ತೇನೆ ಎಂದರು.

Comments

Leave a Reply

Your email address will not be published. Required fields are marked *