ಮೋದಿಗೆ ಹೃದಯವು ಇಲ್ಲ, ದೇಶ ಪ್ರೇಮವೂ ಇಲ್ಲ- ಖರ್ಗೆ ವಾಗ್ದಾಳಿ

– ಮೋದಿಗೆ ಖರ್ಗೆ ಬಹಿರಂಗ ಸವಾಲು

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಗುಣವೇ ಸುಳ್ಳು ಹೇಳುವುದು. ದೇಶಕ್ಕಾಗಿ ಹುತಾತ್ಮರಾದ ರಾಜೀವ್ ಗಾಂಧಿ ಬಗ್ಗೆ ಈ ರೀತಿ ಕೀಳಾಗಿ ಮಾತನಾಡುವುದು ಸರಿಯಲ್ಲ. ಮೋದಿಗೆ ಹೃದಯವು ಇಲ್ಲ, ದೇಶ ಪ್ರೇಮವೂ ಇಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀವ್ ಗಾಂಧಿ ನಂಬರ್ ಒನ್ ಭ್ರಷ್ಟನಾಗಿ ಸಾವನ್ನಪ್ಪಿದ್ದಾರೆ ಎನ್ನುವ ಮೋದಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. 30 ವರ್ಷಗಳ ಹಿಂದೆಯೇ ಈ ವಿಚಾರವನ್ನು ಹೈಕೋರ್ಟ್ ವಜಾಗೊಳಿಸಿದೆ. ಆದರೂ ಮೋದಿ ಈ ವಿಚಾರ ತೆಗೆಯುವುದು ತೀವ್ರ ಖಂಡನೀಯ ಎಂದರು.

ಮೋದಿಗೆ ಯಾವ ವಿಚಾರ ಮಾತನಾಡಬೇಕು ಎನ್ನುವ ಪ್ರಜ್ಞೆಯೂ ಇಲ್ಲ. ಇಂಥವರು ನಮ್ಮ ದೇಶದ ಪ್ರಧಾನಿಯಾಗಿ ಇರುವುದು ದೇಶದ ಜನರ ದುರ್ದೈವವಾಗಿದೆ. ಕೇವಲ ಮಾತಿನಿಂದ ಮರುಳು ಮಾಡುವವರಿಗೆ ಈ ಬಾರಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶದಲ್ಲಿ 40 ಸ್ಥಾನವೂ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ. ಇದು ಸಾಧ್ಯವೇ ಎಂದು ಪ್ರಶ್ನಿಸಿದರು. ಪ್ರಧಾನಿ ಮೋದಿಗೆ ರಾಜಕೀಯ ಜ್ಞಾನವೂ ಇಲ್ಲ, ಆರ್ಥಿಕ ಜ್ಞಾನವೂ ಇಲ್ಲ. ಚಿಕ್ಕಂದಿನಿಂದಲೇ ಮನೆ ಬಿಟ್ಟಿರುವುದರಿಂದ ಮನೆ ಸಂಸ್ಕಾರವೂ ಇಲ್ಲ. ಅಮೇಥಿ, ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಗೆದ್ದರೆ ಮೋದಿ ತಮ್ಮ ಎಂಪಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ ಎಂದು ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋಲು ನಿಶ್ಚಿತ ಎನ್ನುವ ಪ್ರಧಾನಿ ಮೋದಿಗೆ ಖರ್ಗೆ ಬಹಿರಂಗ ಸವಾಲೆಸೆದರು.

ಇದೇ ವೇಳೆ ಕಲಬುರಗಿ ಲೋಕಸಭೆಯಲ್ಲಿ ಖರ್ಗೆ ಸೋಲು ಖಚಿತ ಎನ್ನುವ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು, ಯಡಿಯೂರಪ್ಪ ಒಳ್ಳೆಯ ಜ್ಯೋತಿಷಿ ಅನ್ನಿಸುತ್ತದೆ. ಭವಿಷ್ಯ ಹೇಳುತ್ತಿದ್ದಾರೆ. ನಾವು ಕೆಲಸದ ಮೇಲೆ ನಂಬಿಕೆ ಇಟ್ಟುಕೊಂಡವರಾಗಿದ್ದೇವೆ. ನನ್ನ ಗೆಲುವು ನಿಶ್ಚಿತ ಎಂದು ಜನರ ಪ್ರತಿಕ್ರಿಯೆ ನೋಡಿ ನಾವು ಹೇಳುತ್ತಿದ್ದೇವೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *