ಹಾಸನದಲ್ಲಿ ಬೆಟ್ಟಿಂಗ್ ಜೋರು – ಹಣದ ಜೊತೆಗೆ ಕಾರು, ಲಾರಿ, ದನಕರುಗಳು, ಗದ್ದೆ ಬಾಜಿ

ಹಾಸನ: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲು ಮೇ 23 ರವರೆಗೂ ಸಮಯ ಇದ್ದರೂ ಹಾಸನದಲ್ಲಿ ಈಗಲೇ ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ತೆರೆಮರೆಯಲ್ಲಿ ಜಿಲ್ಲೆಯಲ್ಲಿ ಫಲಿತಾಂಶದ ಕುರಿತು ಬೆಟ್ಟಿಂಗ್ ಕೂಡ ಬಲು ಜೋರಾಗಿ ನಡೆಯುತ್ತಿದ್ದು, ಮತದಾನ ಮುನ್ನ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಾದ-ವಿವಾದದಲ್ಲಿ ಉಭಯ ಕಾರ್ಯಕರ್ತರು ಬೆಟ್ಟಿಂಗ್‍ನಲ್ಲಿ ತೊಡಗಿದ್ದಾರೆ.

ಹಾಸನ ಜೆಡಿಎಸ್ ಪ್ರಾಬಲ್ಯ ಹೊರತಾಗಿಯೂ ಈ ಬಾರಿ ಮಾಜಿ ಪ್ರಧಾನಿ ದೇವೇಗೌಡ ತಮ್ಮ ಮೊಮ್ಮಗ ಪ್ರಜ್ವಲ್‍ಗೆ ತಮ್ಮ ಸ್ಥಾನ ಬಿಟ್ಟು ಕೊಟ್ಟಿದ್ದು, ಈ ಕಾರಣಕ್ಕೆ ಜಿಲ್ಲೆ ರಾಜಕೀಯ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ. ಜಿದ್ದಾಜಿದ್ದಿನ ಫೈಟ್ ಇರುವ ಹಾಸನದಲ್ಲಿ ಸದ್ಯ ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಬೆಟ್ಟಿಂಗ್ ಭರಾಟೆ ಕೂಡ ಜೋರಾಗಿದ್ದು, ಜೆಡಿಎಸ್ ಅಭ್ಯರ್ಥಿಗಳ ಪರ ಬೆಂಬಲಿಗರು 1ಲಕ್ಷಕ್ಕೆ ಮೂರು ಲಕ್ಷ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.

ಈಗಾಗಲೇ ಕೋಟ್ಯಂತರ ರೂಪಾಯಿ ಹಣವನ್ನ ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಬೆಂಬಲಿಗರು ಬೆಟ್ಟಿಂಗ್‍ನಲ್ಲಿ ತೊಡಗಿಸಿದ್ದಾರೆ. ಕೇವಲ ನಗರ ಪ್ರದೇಶದಲ್ಲಿ ಅಲ್ಲದೆ ಹಳ್ಳಿಗಳಲ್ಲಿಯೂ ಕೂಡ ಜಗಲಿ ಕಟ್ಟೆಯಲ್ಲಿ ಕುಳಿತುಕೊಂಡು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಎಂದು ಕರವೆ ಜಿಲ್ಲಾಧ್ಯಕ್ಷ ಮನು ಕುಮಾರ್ ಹೇಳಿದ್ದಾರೆ.

ಒಂದೆಡೆ ಗೆಲುವು ಸೋಲಿನ ನಡುವೆ ಬೆಟ್ಟಿಂಗ್ ನಡೆದರೆ, ಮತ್ತೊಂದೆಡೆ ಗೆಲುವಿನ ಅಂತರಗಳ ಮೇಲೆ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಬೆಟ್ಟಿಂಗ್ ಭರಾಟೆ ಯಾವ ರೀತಿ ಇದೆ ಅಂದರೆ, ಕೋಟ್ಯಂತರ ಹಣದ ಜೊತೆಗೆ ಕಾರು, ಲಾರಿ ದನಕರುಗಳು, ಹೊಲ-ಗದ್ದೆ ಬಾಜಿಗೆ ಕಟ್ಟುತ್ತಿರುವ ಮಾಹಿತಿ ಕೂಡ ಇದೆ. ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ಜೊತೆಗೆ ತಮ್ಮ ತಮ್ಮ ಲಕ್ ಪರೀಕ್ಷೆಗೂ ಮುಂದಾಗಿದ್ದಾರೆ. ಆದರೆ ಈಗಾಗಲೇ ಈ ಬೆಟ್ಟಿಂಗ್ ಭೂತಕ್ಕೆ ಅಮಾಯಕರು ತಮ್ಮ ಜೀವನ ಕಳೆದುಕೊಂಡಿದ್ದಾರೆ. ಇಂತಹ ಕೃತ್ಯದ ಬಗ್ಗೆ ಪೊಲೀಸ್ ಇಲಾಖೆ ಕಣ್ಣು ಇಡುವಂತೆ ಹಾಸನ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ನಾಗೇಶ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *