ಗಂಟೆಗೆ 200 ಕಿ.ಮೀ ವೇಗದಲ್ಲಿ ಫನಿ ಚಂಡಮಾರುತ – ಒಡಿಶಾದಲ್ಲಿ ಕಟ್ಟೆಚ್ಚರ, ಕರ್ನಾಟಕದಲ್ಲೂ ಮಳೆ

ಬೆಂಗಳೂರು: ಕೆಲವೇ ನಿಮಿಷಗಳಲ್ಲಿ 20 ವರ್ಷಗಳಲ್ಲೇ ಅತ್ಯಂತ ಭೀಕರ ಎನ್ನಲಾದ ಫನಿ ಚಂಡಮಾರುತ ಒಡಿಶಾ ಕರಾವಳಿ ಮೂಲಕ ಹಾದುಹೋಗಲಿದೆ. ಒಡಿಶಾದ ಕರಾವಳಿ ಜಿಲ್ಲೆಗಳಾದ ಗೋಪಾಲಪುರ, ಪುರಿ, ಚಾಂದ್‍ಬಾಲಿ ಮೂಲಕ ಸೆಕ್ಲೋನ್ ಅಪ್ಪಳಿಸಲಿದೆ.

ಗುರುವಾರದಿಂದಲೇ ಒಡಿಶಾದಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಗಂಟೆಗೆ 170ರಿಂದ 180 ಕಿಲೋ ಮೀಟರ್ ಗರಿಷ್ಠ 200 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿಯೊಂದಿಗೆ ಮಳೆ ಬೀಳುತ್ತಿದೆ. ಒಡಿಶಾ ದಾಟಿ ಫನಿ ಪಶ್ಚಿಮ ಬಂಗಾಳ ಪ್ರವೇಶಿಸಲಿದ್ದು ಅಲ್ಲಿಯೂ ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ಭೀಕರ ಗಾಳಿ ಬೀಸಲಿದೆ. ಫನಿ ಚಂಡಮಾರುತದ ಎಫೆಕ್ಟ್ ನಿಂದ ಕರ್ನಾಟಕದ ಹಲವು ಕಡೆಗಳಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಸೈಕ್ಲೋನ್ ಹಿನ್ನೆಲೆಯಲ್ಲಿ ರೈಲುಗಳ ಓಡಾಟ ಮತ್ತು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. 8 ಲಕ್ಷ ಅಧಿಕ ಮಂದಿಯನ್ನ ಒಡಿಶಾದಲ್ಲಿ ಸ್ಥಳಾಂತರ ಮಾಡಲಾಗಿದ್ದು, ನೌಕಾದಳ, ವಾಯುಸೇನೆ, ಕರಾವಳಿ ಭದ್ರತಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.

ಫನಿಯಿಂದಾಗಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಶೀತ ಗಾಳಿ ಬೀಸಲಿದ್ದು ವಾತಾವರಣದ ಉಷ್ಣಾಂಶ ತಗ್ಗಲಿದೆ. ಹೈದಾರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಿದೆ. ಆದರೆ ಚಂಡಮಾರುತದ ಪಥ ತೀವ್ರತೆ ಕ್ಷಣ ಕ್ಷಣಕ್ಕೂ ಬದಲಾಗೋದ್ರಿಂದ ಯಾವ ರೀತಿ ವಾತಾವರಣ ದಲ್ಲಿ ಏರುಪೇರಾಗಲಿದೆ ಅನ್ನೋದನ್ನು ಹೇಳಲು ಸಾಧ್ಯವಿಲ್ಲ ಎಂದು ಪ್ರಾಕೃತಿಕ ವಿಕೋಪ ನಿರ್ವಹಣಾ ಇಲಾಖೆ ತಿಳಿಸಿದೆ.

Comments

Leave a Reply

Your email address will not be published. Required fields are marked *