ದರ್ಶನ್ ಅಜ್ಞಾನಕ್ಕೆ ಏನು ಹೇಳಬೇಕೋ ಗೊತ್ತಿಲ್ಲ: ವಿಶ್ವನಾಥ್ ಟಾಂಗ್

ಬೆಂಗಳೂರು: ನಟ ದರ್ಶನ್ ಅವರ ಅಜ್ಞಾನಕ್ಕೆ ಏನು ಹೇಳಬೇಕೋ ಗೊತ್ತಿಲ್ಲ. ಈಗಾಗಲೇ ಬೆಂಬಲ ಬೆಲೆ ಜಾರಿಯಲ್ಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಟಾಂಗ್ ಕೊಟ್ಟಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಬೆಂಬಲ ಬೆಲೆಯನ್ನು ಜಾರಿಗೊಳಿಸಲಾಗಿದೆ. ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ದರ್ಶನ್ ಅವರು ಹೇಳಬೇಕು. ಅದನ್ನು ಬಿಟ್ಟು ಬೆಂಬಲ ಬೆಲೆ ಕೊಡಿ ಎನ್ನುವುದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನು ಓದಿ: ಸಾಲಮನ್ನಾ ಆಗದೇ ಇದ್ರೆ ಬೆಂಬಲ ಬೆಲೆ ನೀಡಿ – ಸರ್ಕಾರಕ್ಕೆ ನಟ ದರ್ಶನ್ ಸವಾಲು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್ ಅವರು, ಮೋಜು, ಮಸ್ತಿ ಮಾಡಲು ಯಾರೂ ಹೋಗಿಲ್ಲ. ಲೋಕಸಭಾ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ಮೂರು ತಿಂಗಳು ಸುತ್ತಾಡಿದ್ದಾರೆ. ಹೀಗಾಗಿ ಮೂರ್ನಾಲ್ಕು ದಿನ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದಕ್ಕೆ ಏನೋನೋ ಅರ್ಥ ಕಲ್ಪಿಸುವುದು ಬೇಡ ಎಂದರು.

ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಅವರು ಬೇಕಾದ್ರೆ ಈಜಾಡ್ಲಿ. ಯಾರು ಬೇಡ ಅಂದೋರು. ಸುಮ್ಮನೆ ಕಮೆಂಟ್ ಮಾಡೋಕೆ ಅಂತ ಏನೇನೋ ಹೇಳಬಾರದು ಎಂದು ತಿರುಗೇಟು ನೀಡಿದರು.

ಮಾಜಿ ಸಚಿವರ ರಮೇಶ್ ಜಾರಕಿಹೊಳಿ ಅವರಿಗೆ ಜೆಡಿಎಸ್‍ನಿಂದ ಸಚಿವ ಸ್ಥಾನ ಆಫರ್ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಲೋಕಸಭಾ ಚುನಾವಣೆ ಫಲಿತಾಂಶ ಮೇ 23 ರಂದು ಬರುತ್ತದೆ. ಬಳಿಕ ಎಲ್ಲವೂ ಚರ್ಚೆಗೆ ಬರುತ್ತೆ ಹಾಗೂ ಸಂಪುಟ ವಿಸ್ತರಣೆಯೂ ಆಗಬಹುದು ಎಂದು ತಿಳಿಸಿದರು.

ಮೈತ್ರಿ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಗೊಂದಲ ಇರುವುದು ಜಾರಕಿಹೊಳಿ ಫ್ಯಾಮಿಲಿಯಲ್ಲಿ. ಅವರ ಮನೆಯಲ್ಲಿರುವ ಗೊಂದಲವನ್ನು ರಾಜ್ಯಕ್ಕೆ ಹಂಚುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಅವರ ನಡೆ ವಿರುದ್ಧ ಅಸಮಾಧಾನ ಹೊರಹಾಕಿದರು.

Comments

Leave a Reply

Your email address will not be published. Required fields are marked *