ನನ್ನ ಬಾವನ ಬಗ್ಗೆ ಮಾತಾಡಿದ್ರೆ ಹುಷಾರ್- ಶಿವನಗೌಡಗೆ ಅಕ್ಕನಿಂದಲೇ ವಾರ್ನಿಂಗ್

ರಾಯಚೂರು: ಚುನಾವಣಾ ಪ್ರಚಾರ ಭಾಷಣದಲ್ಲಿ ಸಿಎಂ ಹಾಗೂ ರಾಯಚೂರು ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ್ ವಿರುದ್ಧ ಮನಸೋ ಇಚ್ಛೆ ನಾಲಿಗೆ ಹರಿಬಿಟ್ಟಿದ್ದ ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್‍ಗೆ ಮಹಿಳೆಯೊಬ್ಬರು ಟಾಂಗ್ ನೀಡಿದ್ದಾರೆ.

ದೇವದುರ್ಗದಲ್ಲಿ ಮತ ಪ್ರಚಾರ ವೇಳೆ ಮಾತನಾಡಿದ ಮಹಿಳೆ, ಬಿ.ವಿ ನಾಯಕ್ ಬಗ್ಗೆ ಇನ್ನೊಮ್ಮೆ ಅವಹೇಳನಕಾರಿ ಮಾತುಗಳನ್ನ ಆಡಿದರೆ ಅಲ್ಲಿಯ ಸಭೆಗೆ ಬಂದು ಉತ್ತರ ಕೊಡುತ್ತೇನೆ. ನಿನ್ನ ಎಲ್ಲಾ ಕರ್ಮಕಾಂಡಗಳು ಗೊತ್ತು, ನೀನೇ ಸ್ವತಃ ಹೇಳಿದ್ದನ್ನ ಬಯಲು ಮಾಡುತ್ತೇನೆ ಎಂದು ಅವಾಜ್ ಹಾಕಿದ್ದಾರೆ.

ಈ ಮಹಿಳೆ ಬೇರೆ ಯಾರೂ ಅಲ್ಲ ಶಿವನಗೌಡ ನಾಯಕ್‍ಗೆ ಸಂಬಂಧದಲ್ಲಿ ಅಕ್ಕ ಆಗಬೇಕು. ಮೈತ್ರಿ ಅಭ್ಯರ್ಥಿ ಬಿ.ವಿ ನಾಯಕ್ ಸಹೋದರ ರಾಜಶೇಖರ್ ನಾಯಕ್ ಪತ್ನಿ ಶ್ರೀದೇವಿ ನಾಯಕ್, ಶಿವನಗೌಡಗೆ ನಾಲಿಗೆ ಹರಿಬಿಡದಂತೆ ಅವಾಜ್ ಹಾಕಿದ್ದಾರೆ. ಏನೂ ಇಲ್ಲದಾಗ ನಮ್ಮ ಸಹಾಯವನ್ನ ಪಡೆದು ಈಗ ಅಧಿಕಾರ ಬಂದಾಗ ನಮ್ಮ ವಿರುದ್ಧ ಮಾತನಾಡುತ್ತಿದ್ದೀಯಾ. ಹೆಚ್ಚು ಮಾತನಾಡಿದರೆ ಸಹಿಸಿಕೊಳ್ಳಲು ನಾನು ಬಾವ ಬಿ.ವಿ.ನಾಯಕ್, ತಾತ ವೆಂಕಟೇಶ್ ನಾಯಕ್ ತರ ಅಲ್ಲಾ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಏಪ್ರಿಲ್ 16 ರಂದು ಸಿರವಾರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಸಿಎಂ ಹಾಗೂ ಬಿ.ವಿ.ನಾಯಕ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಜಿಲ್ಲಾ ಚುನಾವಣಾಧಿಕಾರಿ ಶರತ್ ಬಿ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಶಿವನಗೌಡ ನಾಯಕ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿದ್ದಾರೆ.

Comments

Leave a Reply

Your email address will not be published. Required fields are marked *