ಹಳಿ ತಪ್ಪಿದ ರೈಲು – ತಲೆಕೆಳಗಾದ 12 ಬೋಗಿಗಳು

ಲಕ್ನೋ: ಉತ್ತರ ಪ್ರದೇಶದ ಕಾನ್ಪುರ ಸಮೀಪ ಹೌರಾ-ದೆಹಲಿ ಮಧ್ಯೆ ಸಂಚರಿಸುವ ಪೂರ್ವ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ 15 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಈ ರೈಲು ಪ್ರಯಗ್‍ನಿಂದ ದೆಹಲಿಗೆ ಹೋಗುತ್ತಿತ್ತು. ಆದರೆ ಕಾನ್ಪುರದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ರೂಮಾ ಗ್ರಾಮದ ಬಳಿ ಮಧ್ಯರಾತ್ರಿ 1 ಗಂಟೆಗೆ ರೈಲು ದುರಂತ ಸಂಭವಿಸಿದೆ. ಎಕ್ಸ್ ಪ್ರೆಸ್ ರೈಲಿನ 12 ಬೋಗಿಗಳು ಹಳಿ ತಪ್ಪಿದ್ದು, ಮಗುಚಿ ತಲೆಕೆಳಗಾಗಿ ಬಿದ್ದಿದೆ. ಪರಿಣಾಮ 15 ಮಂದಿಗೆ ಗಾಯಗಳಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ 15 ಅಂಬುಲೆನ್ಸ್ ದೌಡಾಯಿಸಿ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರೈಲು ದುರಂತದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ವೈದ್ಯಕೀಯ ಸೇವೆಯನ್ನು ಒದಗಿಸಲಾಗಿದೆ. ಸದ್ಯಕ್ಕೆ ಈ ಅವಘಡದಿಂದ ಯಾವುದೇ ಸಾವು ಸಂಭವಿಸಿಲ್ಲ. ಈ ಮಾರ್ಗದ ಮೂಲಕ ದೆಹಲಿಗೆ ಸಂಚರಿಸುವ ರೈಲುಗಳ ಸೇವೆ ವಿಳಂಬವಾಗಿವೆ. ಪೊಲೀಸರು ರಕ್ಷಣಾ ಕಾರ್ಯ ಮಾಡುತ್ತಿದ್ದು, ರಕ್ಷಣಾ ಪಡೆಯ 45 ಸದಸ್ಯರ ತಂಡ ಕೂಡ ಸ್ಥಳದಲ್ಲಿದ್ದಾರೆ ಎಂದು ಭಾರತೀಯ ರೈಲ್ವೆ ವಕ್ತಾರ ಸ್ಮಿತಾ ಶರ್ಮಾ ತಿಳಿಸಿದ್ದಾರೆ.

ಕಾನ್ಪುರಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಬಸ್ ವ್ಯವಸ್ಥೆ ಮಾಡಲಾಗಿದೆ. ಕಾನ್ಪುರದಿಂದ ದೆಹಲಿಯ ಹೋಗುವ ಪ್ರಯಾಣಿಕರಿಗೆ ರೈಲಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಹ ಗಾಯಗೊಂಡಿರುವ ಪ್ರಯಾಣಿಗಳಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Comments

Leave a Reply

Your email address will not be published. Required fields are marked *