ಸಾಗರದಿಂದ ಬೆಂಗ್ಳೂರಿಗೆ ತೆರಳ್ತಿದ್ದ ಬಸ್ ಪಲ್ಟಿ- ಮೂವರ ದುರ್ಮರಣ

– ಶಾಸಕ ಹರತಾಳು ಹಾಲಪ್ಪ ಸಹಾಯ

ಶಿವಮೊಗ್ಗ: ಸಾಗರಿಂದ ಬೆಂಗಳೂರಿಗೆ ತೆರಳುತ್ತಿದ್ದ ಸೀಬರ್ಡ್ ಖಾಸಗಿ ಬಸ್ ಪಲ್ಟಿಯಾಗಿದ್ದು, ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಈ ಘಟನೆ ಸಾಗರ ಸಮೀಪದ ಉಳ್ಳೂರು ಎಂಬಲ್ಲಿ ನಡೆದಿದೆ. ಹೊನ್ನಾವರದ ಕೀರ್ತನಾ, ಸುಜಾತ, ಚಿತ್ರದುರ್ಗ ಜಿಲ್ಲೆಯ ಮೊಹಮ್ಮದ್ ಮೃತ ದುರ್ದೈವಿಗಳಾಗಿದ್ದಾರೆ. ಬಸ್ಸಿನಲ್ಲಿ ಸುಮಾರು 40 ಜನ ಪ್ರಯಾಣಿಕರಿದ್ದರು.

ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಪಲ್ಟಿಯಾದ ಬಳಿಕ ಬಸ್ ಒಳಗೆ ಸಿಲುಕಿಕೊಂಡಿದ್ದವರನ್ನು ಹರಸಾಹಸಪಟ್ಟು ಸ್ಥಳೀಯರು, ಪೊಲೀಸರು ಹೊರತೆಗೆದಿದ್ದಾರೆ. ಬಳಿಕ ಗಾಯಾಳುಗಳನ್ನು ಕೂಡಲೇ ಸಾಗರ, ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ.

ಗಾಯಾಳುಗಳನ್ನು ಸಾಗಿಸುತ್ತಿದ್ದಾಗ ಅದೇ ಮಾರ್ಗವಾಗಿ ಶಾಸಕ ಹರತಾಳು ಹಾಲಪ್ಪ ಬರುತ್ತಿದ್ದರು. ಈ ವೇಳೆ ಅವರು ಕೂಡ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದ್ರು.

ಘಟನೆ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *