ಇವಿಎಂನಲ್ಲಿ ಕಾಂಗ್ರೆಸ್ ಬಿಟ್ಟು ಬೇರೆ ಬಟನ್ ಒತ್ತಿದ್ರೆ ಶಾಕ್ ಹೊಡೆಯುತ್ತೆ: ಕಾಂಗ್ರೆಸ್ ಸಚಿವ

ರಾಯ್‍ಪುರ: ಮತಗಟ್ಟೆಯಲ್ಲಿ ಸಿಸಿಟಿವಿ ಕ್ಯಾಮೆರಾ ಇರುತ್ತದೆ. ನೀವು ಯಾರಿಗೆ ವೋಟ್ ಹಾಕಿದ್ದೀರಿ ಅಂತ ನಮಗೆ ತಿಳಿಯುತ್ತದೆ ಎಂದು ಬಿಜೆಪಿ ಶಾಸಕ ಹೇಳಿಕೆ ನೀಡಿದ್ದ ಬೆನ್ನಲ್ಲೆ ಕಾಂಗ್ರೆಸ್‍ನ ಸಚಿವ ಕರೆಂಟ್ ಶಾಕ್ ಭಯವನ್ನು ಮತದಾರರಲ್ಲಿ ಬಿತ್ತಿ ಸುದ್ದಿಯಾಗಿದ್ದಾರೆ.

ಛತ್ತೀಸಗಢದ ಕಂಕೇರ್ ಜಿಲ್ಲೆಯಲ್ಲಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಕವಾಸಿ ಲಖ್ಮಾ ಅವರು, ಮತದಾರರು ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಮತ ಹಾಕಿದರೆ ಕರೆಂಟ್ ಶಾಕ್ ಹೊಡೆಯಲಿದೆ ಎಂದು ಹೇಳಿದ್ದಾರೆ.

ಇವಿಎಂನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೈರೇಶ್ ಥಾಕೂರ್ ಅವರ ಕ್ರಮ ಸಂಖ್ಯೆ ಒಂದು. ಹೀಗಾಗಿ ನೀವು ಮೊದಲ ಬಟನ್ ಒತ್ತಿ ಅವರಿಗೆ ಮತದಾನ ಮಾಡಬೇಕು. ಒಂದು ವೇಳೆ ನೀವು ಮೊದಲ ಬಟನ್ ಬಿಟ್ಟು ಎರಡು ಅಥವಾ ಮೂರನೇ ಬಟನ್ ಒತ್ತಿದರೆ ಕರೆಂಟ್ ಶಾಕ್ ಹೊಡೆಯುತ್ತದೆ ಎಂದು ಮತದಾರರಿಗೆ ಭಯ ಮೂಡಿಸಿದ್ದಾರೆ.

ಈ ಸಂಬಂಧ ಛತ್ತೀಸಗಢ ಬಿಜೆಪಿ ಘಟಕವು ಚುನಾವಣೆ ಆಯೋಗಕ್ಕೆ ದೂರು ನೀಡಿತ್ತು. ದಾಖಲೆಗಳನ್ನು ಪರಿಶೀಲನೆ ನಡೆಸಿದ ಚುನಾವಣಾ ಆಯೋಗವು ಸಚಿವರಿಗೆ ನೋಟಿಸ್ ನೀಡಿದ್ದು, ಮೂರು ದಿನಗಳ ಒಳಗಾಗಿ ಉತ್ತರ ನೀಡುವಂತೆ ಸೂಚನೆ ನೀಡಿದೆ.

ಗುಜರಾತ್‍ನ ಬಿಜೆಪಿ ಶಾಸಕ ರಮೇಶ್ ಕಟಾರ ಅವರು, ಕಾಂಗ್ರೆಸ್‍ಗೆ ಯಾರು ಮತ ಹಾಕಿದರು ಅಂತ ನೋಡಲು ಪ್ರಧಾನಿ ನರೇಂದ್ರ ಮೋದಿ ಅವರು ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇಟ್ಟಿದ್ದಾರೆ. ನೀವು ಮತದಾನ ಮಾಡುವಾಗ ಮತಯಂತ್ರ (ಇವಿಎಂ)ದಲ್ಲಿರುವ ಜಸ್ವಂತ್ ಸಿನ್ಹಾ ಬಾಭೋರ್ ಅವರ ಭಾವಚಿತ್ರ ಹಾಗೂ ಕಮಲದ ಚಿಹ್ನೆಯ ಪಕ್ಕದಲ್ಲೇ ಹಸಿರು ಗುಂಡಿ ಇರುತ್ತದೆ. ಅದನ್ನು ನೀವು ಒತ್ತಬೇಕು. ಸಿಸಿಟಿವಿ ಕ್ಯಾಮೆರಾಗಳು ಇರುವುದರಿಂದ ಯಾರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಯಿಂದಾಗಿ ಶಾಸಕರಿಗೆ ಚುನಾವಣಾ ಆಯೋಗವು ನೋಟಿಸ್ ನೀಡಿದೆ.

ಈ ಮೊದಲು ಸುಲ್ತಾನಪುರದ ಬಿಜೆಪಿ ಅಭ್ಯರ್ಥಿಯಾಗಿರುವ, ಕೇಂದ್ರ ಸಚಿವೆ ಮನೇಕಾ ಗಾಂಧಿ, ಮುಸ್ಲಿಮರ ಮತಗಳ ಹೊರತಾಗಿ ನಾನು ಜಯ ಸಾಧಿಸುತ್ತೇನೆ. ಮುಸ್ಲಿಂ ಸಮುದಾಯದ ಮತ ಪಡೆಯದೇ ಜಯ ಸಾಧಿಸಲು ನನಗೆ ಇಷ್ಟವಿಲ್ಲ. ಗೆದ್ದ ಮೇಲೆ ಕೆಲಸ ಕೇಳಿಕೊಂಡು ಮುಸ್ಲಿಮರು ಬಂದಾಗ ನಾನು ನೂರು ಬಾರಿ ಯೋಚಿಸಿ ಉದ್ಯೋಗ ನೀಡೋದು ಬೇಡ ಎಂದು ನಿರ್ಧರಿಸಬೇಕಾಗುತ್ತದೆ. ಮತದ ಬದಲಾಗಿ ಉದ್ಯೋಗ ನೀಡೋದು ವ್ಯವಹಾರ ಎಂದು ಮುಸ್ಲಿಮರು ತಿಳಿದುಕೊಳ್ಳಬೇಕಿದೆ. ನಾವೇನು ಮಹಾತ್ಮ ಗಾಂಧೀಜಿಯ ಕುಟುಂಬಸ್ಥರು ಅಲ್ಲ. ಕೇವಲ ಕೊಡುವುದು ಗೊತ್ತಿಲ್ಲ. ನಮ್ಮ ಕೆಲಸಕ್ಕೆ ಪ್ರತಿಯಾಗಿ ನೀವು ನಮಗೆ ಮತ ನೀಡಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು.

Comments

Leave a Reply

Your email address will not be published. Required fields are marked *