ಇಂದು ಡಾ. ರಾಜ್‍ಕುಮಾರ್ ಪುಣ್ಯಸ್ಮರಣೆ – ವರನಟನ ಜನ್ಮ ದಿನದಂದು ಸ್ಪೆಷಲ್ ಗಿಫ್ಟ್

ಬೆಂಗಳೂರು: ಇಂದು ವರನಟ ಡಾ. ರಾಜ್‍ಕುಮಾರ್ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಇಡೀ ಕುಟುಂಬ ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸಿದ್ದಾರೆ. ರಾಜ್‍ಕುಮಾರ್ ಅವರ ಹುಟ್ಟುಹಬ್ಬದಂದು ಅವರ ಕುಟುಂಬ ವಿಭಿನ್ನ ಉಡುಗೊರೆ ನೀಡಲಿದ್ದಾರೆ.

ಇಂದು ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಮೂವರು ಸೋದರರು ಕುಟುಂಬ ಸಮೇತರಾಗಿ ತಂದೆ-ತಾಯಿಯ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ಮನೆಯಲ್ಲಿಯೂ ಅಭಿಮಾನಿಗಳ ಜೊತೆಯಲ್ಲಿ ರಾಜ್‍ಕುಮಾರ್ ಮಕ್ಕಳು ಪೂಜೆ ಸಲ್ಲಿಸಲಿದ್ದಾರೆ.

ಇದೇ ತಿಂಗಳು 24ರಂದು ರಾಜ್‍ಕುಮಾರ್ ಅವರ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಅವರ ಕುಟುಂಬ ವಿಭಿನ್ನ ಉಡುಗೊರೆಯಾಗಿ ತಂದೆಯ ತ್ಯಾಗ, ಪ್ರೀತಿ ಸಾರುವ ‘ಅಪ್ಪನ ಅಂಗಿ’ ಚಿತ್ರ ಸೆಟ್ಟೇರಲಿದೆ. ಏಪ್ರಿಲ್ 24ರಂದು ಮಾಧ್ಯಮಗಳೊಂದಿಗೆ ಚರ್ಚಿಸಿ ಚಿತ್ರದ ರೂಪುರೇಷ ಸಿದ್ಧಪಡಿಸಲಾಗುತ್ತದೆ. ಸುಮಾರು 85 ವರ್ಷ ಹಳೆಯ ತಂದೆಯ ಅಂಗಿ ಆಧರಿಸಿ ಚಿತ್ರ ಮಾಡಲಾಗುತ್ತಿದೆ ಎಂದು ರಾಘವೇಂದ್ರ ರಾಜ್‍ಕುಮಾರ್ ಹೇಳಿದರು.


ಎಪ್ರಿಲ್ ತಿಂಗಳು ಬಂದರೆ ರಾಜ್ ಮಾಸ. ಆ ದಿನ ನೆನಪಿಸಿಕೊಂಡರೆ ಮೈ ನಡುಗುತ್ತೆ. ಈ ದಿನ ಬಂದು ಪೂಜೆ ಮಾಡಿದಾಗ ಮಾತ್ರ ಅವರು ಇಲ್ಲ ಎಂದು ಅನಿಸುತ್ತದೆ. ಕಳೆದ ವರ್ಷ “ಅಮ್ಮನ ಮನೆ” ಸಿನಿಮಾ ಮಾಡಿ ಅಮ್ಮನಿಗೆ ಅರ್ಪಸಿದ್ದೆ. ಈ ವರ್ಷ “ಅಪ್ಪನ ಅಂಗಿ” ಎನ್ನುವ ಸಿನಿಮಾ ಮಾಡಿ ಅಪ್ಪಾಜಿಗೆ ಅರ್ಪಿಸುತ್ತಿದ್ದೇನೆ. ಮಾಧ್ಯಮದವರ ಜೊತೆ ಸೇರಿ ಈ ಸಿನಿಮಾ ಮಾಡುವ ಯೋಚನೆಯಲ್ಲಿದ್ದೇವೆ. 2 ವರ್ಷದಿಂದ ನನ್ನ ದೇಹದ ಅರ್ಧ ಭಾಗ ಕೆಲಸ ಮಾಡುತ್ತಿರಲಿಲ್ಲ. ಅಪ್ಪಾಜಿ ಆಶೀರ್ವಾದದಿಂದ ಮೂರು ಸಿನಿಮಾ ಮಾಡುತ್ತಿದ್ದೇನೆ ಎಂದು ರಾಘವೇಂದ್ರ ರಾಜ್‍ಕುಮಾರ್ ತಿಳಿಸಿದರು.

ಅಪ್ಪಾಜಿ ಇಲ್ಲ ಎಂಬ ನೋವು ಇದೆ. ಇಂದಿಗೆ ಅವರು ಅಗಲಿ 13 ವರ್ಷ ಆಗಿದೆ. ಅವರು ಇಲ್ಲಿ ಇದ್ದಾರೆ ಎಂಬ ನಂಬಿಕೆ ಇದೆ ಎಂದರು. ಬಳಿಕ ರಾಘವೇಂದ್ರ ರಾಜ್ ಕುಮಾರ್ ಟೈಟಲ್ ಲಾಂಚ್ ವಿಚಾರದ ಬಗ್ಗೆ ಮಾತನಾಡಿದ ಅವರು ಇದು ಅಪ್ಪಾಜಿ ಆಶೀರ್ವಾದ. ಅಪ್ಪು ಬ್ಯಾನರ್ ಅಂದ್ರೆ ನಮ್ಮದೇ ತಾನೇ. ಅಲ್ಲದೆ ರಾಘು ಈಗ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ನೋಡಿ ಖುಷಿ ತಂದಿದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ತಿಳಿಸಿದರು.

Comments

Leave a Reply

Your email address will not be published. Required fields are marked *