ಮತ್ತೆ ಸಚಿವ ಪುಟ್ಟರಾಜು ಮನೆ ಮೇಲೆ ಐಟಿ ರೇಡ್

ಮೈಸೂರು: ಸಚಿವ ಪುಟ್ಟರಾಜು ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೈಸೂರಿನ ಯಾದವಗಿರಿಯಲ್ಲಿರುವ ಪುಟ್ಟರಾಜು ನಿವಾಸದ ಮೇಲೆ ಐಟಿ ದಾಳಿ ನಡೆಸಿದೆ. ಕಳೆದ 20 ದಿನಗಳ ಹಿಂದೆಯಷ್ಟೇ ಐಟಿ ದಾಳಿ ಎದುರಿಸಿದ್ದ ಇವರು ಮತ್ತೆ ಐಟಿ ದಾಳಿಯನ್ನ ಎದುರಿಸುತ್ತಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ದ್ವೇಷ ರಾಜಕಾರಣ ಪರಿಣಾಮ ಮತ್ತೆ ಐಟಿ ದಾಳಿ ನಡೆದಿದೆ. ನಾನು ಹಾಗೂ ಪುತ್ರ ಇಬ್ಬರು ಮಂಡ್ಯದ ಚುನಾವಣಾ ಪ್ರಚಾರದಲ್ಲಿ ಇದ್ದೇವೆ. ಆದರೆ ಈಗ ದಾಳಿ ನಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ. ಆದರೆ ನನಗೆ ಯಾವುದೇ ಮಾಹಿತಿಯನ್ನು ಐಟಿ ಅಧಿಕಾರಿಗಳು ನೀಡಿ ಮನೆಗೆ ಬರುವಂತೆ ತಿಳಿಸಿಲ್ಲ. ನನಗೆ ಮಾಹಿತಿ ಲಭಿಸಿದ ಬಳಿಕ ಸ್ಥಳಕ್ಕೆ ತೆರಳುವ ನಿರ್ಧಾರ ಮಾಡಿದ್ದು, ಪ್ರಚಾರ ಕಾರ್ಯ ನಡೆಸಿ ಮನೆಗೆ ಹೋಗುತ್ತೇನೆ. ಬಿಜೆಪಿ ಅವರ ಕುಮ್ಮಕ್ಕಿನಿಂದ ಈ ದಾಳಿಗಳು ನಡೆಯುತ್ತಿವೆ ಎಂದರು.

ಕಳೆದ 20 ದಿನಗಳ ಹಿಂದೆ ಪುಟ್ಟರಾಜು ಅವರ ನಿವಾಸ ಹಾಗೂ ಸಂಬಂಧಿಕರ ಮನೆ ಮೇಲೆ ದಾಳಿ ನಡೆದಿತ್ತು. ಈ ವೇಳೆಯೂ ದಾಳಿಯ ಕುರಿತು ಕಿಡಿ ಕಾರಿದ್ದ ಅವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಆ ಬಳಿಕ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಆತ್ಮಾನಂದ ಮನೆ ಮೇಲಿನ ಐಟಿ ದಾಳಿ ವಿರುದ್ಧವೂ ಪುಟ್ಟರಾಜು ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಇಂತಹ ಸಾವಿರ ಐಟಿ ದಾಳಿ ಮಾಡಿದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರನ್ನು ಹೆದರಿಸಲು ಸಾಧ್ಯವಿಲ್ಲ. ಮೈತ್ರಿ ಪಕ್ಷಗಳ ಮುಖಂಡರ ಸಭೆ ಆತ್ಮಾನಂದ ಅವರ ಮನೆಯಲ್ಲಿ ನಡೆದಿತ್ತು. ಈ ಮೂಲಕ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ನಡೆಸುವ ಹುನ್ನಾರ ಎನ್ನುವುದು ನಮಗೆ ಗೊತ್ತಾಗುತ್ತಿದೆ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *