ಚುನಾವಣಾ ಆಯೋಗದ ಬಗ್ಗೆ ವಿಶ್ವಾಸ ಕಳೆದುಕೊಳ್ತಿದ್ದೇವೆ – ದಿನೇಶ್ ಗುಂಡೂರಾವ್

ದಾವಣಗೆರೆ: ಚುನಾವಣಾ ಆಯೋಗದ ಬಗ್ಗೆ ನಾವು ವಿಶ್ವಾಸ ಕಳೆದುಕೊಳ್ಳುತ್ತಿದ್ದೇವೆ. ಮೋದಿಯವರು ಏನೇ ಮಾತನಾಡಿದರೂ ಸುಮ್ಮನೆ ಇರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಬಾಪೂಜಿ ಮೈದಾನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿಯವರು ಉದ್ಯೋಗ ಸೃಷ್ಠಿ ಮಾಡಿದ್ದೇನೆ. ಮತ ನೀಡಿ ಎಂದು ಕೇಳುತ್ತಿಲ್ಲ. ಪಾಕ್ ಮೇಲೆ ಯುದ್ಧ ಮಾಡಿದ್ದೇವೆ ವೋಟ್ ಕೊಡಿ ಎನ್ನುತ್ತಿದ್ದಾರೆ. ಈ ರೀತಿ ಬಹಿರಂಗವಾಗಿ ವೇದಿಕೆ ಮೇಲೆ ಹೇಳಿದರೂ ಚುನಾವಣಾ ಆಯೋಗ ಏನು ಮಾಡುತ್ತಿಲ್ಲ. ಮಾಧ್ಯಮ ಕ್ಷೇತ್ರದ ಮೇಲೆ ಬೆದರಿಕೆ ಹಾಕುತ್ತಿದ್ದಾರೆ. ಅವರನ್ನು ಸಹ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳುತ್ತಾರೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರು.

ದಾವಣಗೆರೆಯಲ್ಲಿ ಲೋಕಸಭಾ ಸದಸ್ಯರ ಸಾಧನೆ ಏನೂ ಇಲ್ಲ. ಹೀಗಾಗಿ ಮಂಜಪ್ಪನವರ ಗೆಲುವು ಖಚಿತ. ಮಂಡ್ಯದಲ್ಲಿ ಸುಮಲತಾಗೆ ಮೋದಿ ಬೆಂಬಲ ನೀಡುತ್ತಿದ್ದಾರೆ. ಸುಮಲತಾ ಬಿಜೆಪಿ ಅಭ್ಯರ್ಥಿ ಆನ್ನೋದು ಇದರಿಂದ ಗೊತ್ತಾಗುತ್ತಿದೆ. ಮಂಡ್ಯದಲ್ಲಿ ನಿಖಿಲ್ ಭಾರೀ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ರು.

ರಾಜ್ಯದಲ್ಲಿ ಆದಾಯ ತೆರಿಗೆ ಇಲಾಖೆ ಬಿಜೆಪಿಯ ಬ್ರಾಂಚ್ ಆಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲು ಆದಾಯ ತೆರಿಗೆ ಇಲಾಖೆ ಬಳಕೆ ಮಾಡಿಕೊಂಡು ಪ್ರತಿಯೊಂದು ಸಂಸ್ಥೆಯನ್ನು ಸರ್ವನಾಶ ಮಾಡಿದ್ದಾರೆ. ಅಲ್ಲದೆ ಯಡಿಯೂರಪ್ಪ ಮನೆ ಮೇಲೆ ಯಾಕೆ ಐಟಿ ದಾಳಿ ನಡೆಯುವುದಿಲ್ಲ. 200, 300 ಕೋಟಿ ಮನೆಯಲ್ಲಿ ಇಟ್ಟುಕೊಂಡು ಆಪರೇಶನ್ ಕಮಲ ಮಾಡುತ್ತಾ ಇದ್ದಾರೆ ಎಂದು ಗರಂ ಆದ್ರು.

ರಾಹುಲ್ ಗಾಂಧಿ ವಯನಾಡ್‍ಗೆ ಹೋದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ದಿನೇಶ್, ಯಾರಿಗೂ ಹೆದರಿ ರಾಹುಲ್ ಕೇರಳಕ್ಕೆ ಹೋಗಿಲ್ಲ. ರಾಹುಲ್ ಅವರು ಎರಡೂ ಕಡೆ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *