ಸಹೋದರಿಯನ್ನು ಚುಡಾಯಿಸ್ತಿದ್ದ ಯುವಕನ ಕೊಲೆ

ಧಾರವಾಡ: ಸಹೋದರಿಗೆ ಚುಡಾಯಿಸುತ್ತಿದ್ದ ಯುವಕನನ್ನು ಯುವತಿಯ ಸಹೋದರ ಹಾಗೂ ಆತನ ಗೆಳೆಯ ಸೇರಿ ಕೊಲೆ ಮಾಡಿ ಜೈಲು ಸೇರಿದ ಘಟನೆ ಧಾರವಾಡದಲ್ಲಿ ನಡೆದಿದೆ. ಈ ಕೊಲೆ ಪ್ರಕರಣದ ಹಿಂದೆ ಒಂದು ಪ್ರೇಮ ಕಹಾನಿ ಇದೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಧಾರವಾಡ ಜಿಲ್ಲೆಯ ಅರವಟಗಿ ಗ್ರಾಮದ ಸಂಜಯ್ ಗಿರಿಯಾಲ್ ಎಂಬ ಯುವಕ ಕಳೆದ ಮಾರ್ಚ್ 21 ರಂದು ಕುಂಬಾರಕೊಪ್ಪ ಗ್ರಾಮದ ಅರಣ್ಯದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಸಂಜಯ್ ಕೊಲೆಯಾದ ಬಗ್ಗೆ ಸಹೋದರ ಮಂಜುನಾಥ್ ಅಳ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು.

ಈ ದೂರಿನ ಜಾಡನ್ನು ಹಿಡಿದು ಬೆನ್ನತ್ತಿದ ಪೊಲೀಸರು, ಸಂಜಯ್ ಪ್ರೀತಿ ಮಾಡುತ್ತಿದ್ದ ಅರವಟಗಿ ಗ್ರಾಮದ ಯುವತಿಯ ಸಹೋದರ ವಿಜಯ್‍ಕುಮಾರ್ ಹಾಗೂ ಆತನ ಸ್ನೇಹಿತ ಶ್ರೀಧರ್ ನನ್ನು ಬಂಧಿಸಿದ್ದರು. ಇವರಿಬ್ಬರ ಬಂಧನದ ನಂತರ ಇಬ್ಬರ ಬಾಯಿ ಬಿಡಿಸಿದ ಪೊಲೀಸರಿಗೆ, ಈ ಕೊಲೆ ಅವರೇ ಮಾಡಿದ್ದಾರೆ ಎಂದು ಬೆಳಕಿಗೆ ಬಂದಿದೆ.

ಕೊಲೆಗೆ ಕಾರಣ ಏನು?
ಕೊಲೆಯಾದ ಸಂಜಯ್, ಯುವತಿಯನ್ನು ಪ್ರತಿದಿನ ಕಾಡುತ್ತಿದ್ದನು. ಯುವತಿ ಧಾರವಾಡ ನಗರದ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಳೆ. ಸಂಜಯ್ ಕೆ.ಇ ಬೋರ್ಡ್ ಕಾಲೇಜಿನಲ್ಲಿ ಓದುತ್ತಿದ್ದ. ಸಂಜಯ್ ಪ್ರತಿ ದಿನ ಹೋದಲ್ಲಿ, ಬಂದಲ್ಲಿ ಯುವತಿಗೆ ಕಿಚಾಯಿಸುತಿದ್ದನು. ಇದನ್ನು ಅರಿತ ಗ್ರಾಮದ ಜನರು ಸಂಜಯ್‍ನಿಗೆ ಬುದ್ಧಿ ಹೇಳಿದರೂ ಆತ ಸರಿ ಹೋಗಿರಲಿಲ್ಲ. ಹೀಗಾಗಿ ನೋಡಿ ನೋಡಿ ಸುಸ್ತಾದ ಯುವತಿಯ ಸಹೋದರ ಹಾಗೂ ಆತನ ಗೆಳೆಯ ಸಂಜಯ್‍ನನ್ನು ಅರಣ್ಯಕ್ಕೆ ಕರೆದೊಯ್ದು ಟವೆಲ್‍ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು.

ಮಾರ್ಚ್ 19ರಂದು ಸಂಜಯ್ ಕೊಲೆ ಮಾಡಿದ್ದ ಯುವತಿಯ ಸಹೋದರ ಹಾಗೂ ಆತನ ಗೆಳೆಯ, ಯಾರಿಗೂ ಗೊತ್ತಿಲ್ಲದಂತೆಯೇ ಗ್ರಾಮದಲ್ಲಿ ಬಂದು ಸುಮ್ಮನಿದ್ದರು. ಆದರೆ ಮಾರ್ಚ್ 21 ರಂದು ಸಂಜಯ್‍ನ ಶವ ಅರಣ್ಯದಲ್ಲಿ ಬಿದ್ದಿದೆ ಎಂದು ಅಲ್ಲಿ ಕಟ್ಟಿಗೆ ತರಲು ಹೋದ ಮಹಿಳೆಯರಿಂದ ಗೊತ್ತಾಗಿತ್ತು.

ಈ ಪ್ರಕರಣದಲ್ಲಿ ಹಲವು ರೀತಿಯ ತನಿಖೆ ನಡೆಯಬೇಕಿದೆ. ಸಂಜಯ್ ಹಾಗೂ ಯುವತಿ ಪ್ರೇಮಿಗಳಾಗಿದ್ರು ಎಂದು ತಿಳಿದುಬಂದಿದ್ದು, ಇಬ್ಬರ ಪ್ರೇಮ ಸಲ್ಲಾಪದ ವಿಡಿಯೋ ಮಾಡಿದ್ದ ಸಂಜಯ್, ಯುವತಿಗೆ ಬ್ಲಾಕ್‍ಮೇಲ್ ಮಾಡುತ್ತಿದ್ದನು ಎನ್ನಲಾಗಿದ್ದು, ಈ ವಿಷಯ ತಿಳಿದ ಯುವತಿ ಸಹೋದರ ಸಂಜಯ್ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರು ಈ ಬಗ್ಗೆ ಕೂಡ ತನಿಖೆ ನಡೆಸಿದ್ದು, ಯುವತಿ ಸಹೋದರ ವಿಜಯ್‍ಕುಮಾರ್ ಹಾಗೂ ಆತನ ಸ್ನೇಹಿತ ಶ್ರೀಧರ್‍ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಹಲವು ಒಳಗಿನ ವಿಷಯಗಳು ಹೊರ ಬರಬೇಕಿವೆ. ಸದ್ಯ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *