ಅರ್ಥ ಮಾಡ್ಕೊಳ್ಳಿ, ನಿಮ್ಮ ಕಷ್ಟ-ಸುಖ ಕುಮಾರಣ್ಣ, ದೇವೇಗೌಡ್ರೇ ಕೇಳಬೇಕು- ನಿಖಿಲ್ ಪರ ರೇವಣ್ಣ ಪ್ರಚಾರ

ಮಂಡ್ಯ: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಲೋಕೋಪಯೋಗಿ ಸಚಿವ ಎಚ್‍ಡಿ.ರೇವಣ್ಣ ಅವರು ಚುನಾವಣಾ ಅಖಾಡಕ್ಕಿಳಿದ್ದಾರೆ. ನಿಮ್ಮ ಕಷ್ಟ ಹಾಗೂ ಸುಖವನ್ನು ಕುಮಾರಣ್ಣ ಹಾಗೂ ದೇವೇಗೌಡರೇ ಕೇಳಬೇಕು. ಹೀಗಾಗಿ ಅರ್ಥಮಾಡಿಕೊಂಡು ನಿಖಿಲ್ ಗೆ ವೋಟು ಹಾಕಿ ಎಂದು ಹೇಳಿದ್ದಾರೆ.

ರೇವಣ್ಣ ಅವರು ಮಂಡ್ಯದ ಕೆ.ಆರ್ ಪೇಟೆಯಲ್ಲಿ ಕಾಂಗ್ರೆಸ್ ಮುಖಂಡರ ಮನೆಗಳಿಗೆ ತೆರಳಿ ನಿಖಿಲ್ ಬೆಂಬಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್ ಮತ್ತು ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಅವರ ಮನೆಗೆ ಭೇಟಿ ನೀಡಿದ್ದು, ನಿಖಿಲ್ ಅವರನ್ನು ಬೆಂಬಲಿಸುವಂತೆ ಜೊತೆಗೆ ಅವರ ಪರವಾಗಿ ಮತಯಾಚನೆ ಮಾಡಿ ಎಂದು ಕೇಳಿಕೊಂಡಿದ್ದಾರೆ.

ಅಂಬರೀಶ್ ಅಣ್ಣ ಅವರ ಬಗ್ಗೆ ಮಾತನಾಡಲ್ಲ. ಆದರೆ ಕುಮಾರಣ್ಣ ಅವರಿಗೆ ಚಾಲೆಂಜ್ ಮಾಡಲು ಹೊರಟಿರುವ ಇವರ ಕೊಡುಗೆ ಮಂಡ್ಯ ಜಿಲ್ಲೆಗೆ ಏನಿದೆ ಎಂದು ಸುಮಲತಾಗೆ ಪರೋಕ್ಷವಾಗಿ ಪ್ರಶ್ನೆ ಮಾಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಾರು 23ರ ನಂತರ ನಾಪತ್ತೆ ಆಗುತ್ತಾರೆ. ನಿಮ್ಮ ಕಷ್ಟ-ಸುಖ ಕುಮಾರಣ್ಣ, ದೇವೇಗೌಡರೇ ಕೇಳಬೇಕು ಅರ್ಥ ಮಾಡಿಕೊಳ್ಳಿ. ನಿಖಿಲ್ ಅವರಿಗೆ ಭಾರೀ ಬಹುಮತಗಳ ಅಂತರದ ಗೆಲುವು ತಂದುಕೊಡಬೇಕು ಎಂದು ಕೈಮುಗಿದು ರೇವಣ್ಣ ಮನವಿ ಮಾಡಿದ್ದಾರೆ.

ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದ್ದಾರೆ. ಜೊತೆಗೆ ಸಾವಿರಾರು ಕೋಟಿ ಅನುದಾನವನ್ನು ಜಿಲ್ಲೆಗೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರು 6 ಸಾವಿರ ರೈತರಿಗೆ ಕೊಡುತ್ತೇನೆ ಎಂದರು. ಆದರೆ ಇನ್ನೂ ರೈತರ ಅಕೌಂಟ್‍ಗೆ ಹಾಕಿಲ್ಲ. ಇದೇ ಮೋದಿ ಇದ್ದರೆ ಸಂಘರ್ಷ ಆಗುತ್ತದೆ. ಹೀಗಾಗಿ ವೋಟ್ ಕೊಡುವುದಕ್ಕೆ ಜನರಿದ್ದಾರೆ. ನಾವು ಪ್ರಚಾರ ಮಾಡಬೇಕು. ನಾಳೆಯಿಂದ ನೀವೆಲ್ಲರೂ ಒಂದು ತಾಲೂಕಿಗೆ ಗುಂಪಾಗಿ ಹೋಗಿ ಪ್ರಚಾರ ಮಾಡಿ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *