ಯುವತಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಯುವತಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಸಲೀಂ ಕೊಲೆಯಾದ ವ್ಯಕ್ತಿ. ಸಲೀಂ ನಗರದ ಟ್ಯಾನರಿ ರೋಡ್‍ನ ನಿವಾಸಿಯಾಗಿದ್ದು, ಏರಿಯಾದಲ್ಲಿ ಮೆಕ್ಯಾನಿಕ್ ಆಗಿ ಫೇಮಸ್ ಆಗಿದ್ದ. ಸಲೀಂ ನನ್ನ ಕಳೆದ ಶನಿವಾರ ಸಂಜೆ ಡಿಯೋ ಬೈಕ್‍ನಲ್ಲಿ ಬಂದಿದ್ದ ಐವರು ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿಕೊಂದು ಪರಾರಿಯಾಗಿದ್ದರು. ನಾಲ್ವರು ಆರೋಪಿಗಳಾದ ಮುನೀರ್, ಸೈಯ್ಯದ್, ಶೋಯೆಭ್ ಹಾಗೂ ಹಿದಾಯತ್‍ನನ್ನು ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಕಳೆದ 23ರಂದು ಕೊಲೆಯಾದ ಸಲೀಂ ತನ್ನ ಏರಿಯಾದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಅದೇ ಯುವತಿಯನ್ನು ಮುನೀರ್ ಕೂಡ ಇಷ್ಟಪಡಲು ಶುರು ಮಾಡಿದ್ದ. ಇದೇ ವಿಚಾರಕ್ಕೆ ವರ್ಷದ ಹಿಂದೆ ಸಲೀಂ ಹಾಗೂ ಮುನೀರ್‍ಗೆ ಜಗಳವಾಗಿದ್ದು, ಆ ವೇಳೆ ಸಲೀಂ ತನ್ನ ಯುವತಿ ಕಡೆ ತಿರುಗಿ ನೋಡಿದರೆ ಅಷ್ಟೇ ಎಂದು ಮುನೀರ್ ಗೆ ವಾರ್ನ್ ಮಾಡಿ ಕಳುಹಿಸಿದ್ದನು. ನಂತರ ಮದುವೆ ಕಾರ್ಯಕ್ರಮವೊಂದರಲ್ಲಿ ಮುನೀರ್ ಹಾಗೂ ಸಲೀಂ ಇಬ್ಬರು ಭಾಗವಹಿಸಿದರು.

ಈ ವೇಳೆ ಮದುವೆ ಆರ್ಕೆಸ್ಟ್ರಾದಲ್ಲಿನ ಸೌಂಡ್ ಕಡಿಮೆ ಮಾಡುವಂತೆ ಸಲೀಂ ತಿಳಿಸಿದ್ದಾನೆ. ಆಗ ಅಲ್ಲೇ ಇದ್ದ ಮುನೀರ್ ಆಗಲ್ಲ ಎಂದು ವಿರೋಧಿಸಿದ್ದಾನೆ. ಈ ವೇಳೆ ಮುನೀರ್‍ನ ಮೇಲೆ ಸಲೀಂ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಅಷ್ಟಕ್ಕೆ ಸುಮ್ಮನಾಗದ ಸಲೀಂ ಇತ್ತೀಚೆಗೆ ಏರಿಯಾ ತುಂಬಾ ಮುನೀರ್ ನನ್ನು ಸುಮ್ಮನೇ ಬಿಡುವುದಿಲ್ಲ ಅವನಿಗೆ ಮತ್ತೆ ಹೊಡೆಯುತ್ತೇನೆ ಎಂದು ಹೇಳಿದ್ದನು.

ಸಲೀಂ ನನ್ನ ಹಾಗೇ ಬಿಟ್ರೆ ನಮ್ಮನ್ನು ಹೊಡೆದು ಮುಗಿಸ್ತಾನೆ ಎಂದು ತಿಳಿದ ಮುನೀರ್ ಕಳೆದ ಶನಿವಾರ ಸಲೀಂನ ಮೆಕಾನಿಕ್ ಶಾಪ್ ಬಳಿ ತನ್ನ ಹುಡುಗರ ಜೊತೆ ಬಂದವನೇ ಮಚ್ಚು-ಲಾಂಗುಗಳಿಂದ ಸಲೀಂ ಮೇಲೆ ದಾಳಿ ಮಾಡಿ ಕೊಂದು ಮುಗಿಸಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಈ ಘಟನೆ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 302 ಅಡಿಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಸದ್ಯ ಪೊಲೀಸರು ಈಗ ಪರಾರಿಯಾಗಿರುವ ಮತ್ತೊಬ್ಬ ಆರೋಪಿ ಶಬರೀಶ್‍ಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

Comments

Leave a Reply

Your email address will not be published. Required fields are marked *