ಲಾರಿಗೆ ಸಿಕ್ಕಿಕೊಂಡಿತು ವಿದ್ಯುತ್ ತಂತಿ – ಧರೆಗೆ ಉರುಳಿತು 10ಕ್ಕೂ ಹೆಚ್ಚು ಕಂಬಗಳು

ಬೆಂಗಳೂರು: ಲಾರಿ ಚಾಲಕನೊಬ್ಬ ಅಜಾಗರೂಕತೆಯಿಂದ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಉರುಳಿದ ಘಟನೆ ಬೆಂಗಳೂರು ಹೊರವಲಯ ಹೊಸರೋಡ್ ಸಮೀಪದ ಬಸಾಪುರದಲ್ಲಿ ನಡೆದಿದೆ.

ಬಸಾಪುರದಲ್ಲಿ ಬಹು ಮಾಹಡಿ ಅಪಾರ್ಟ್ ಮೆಂಟ್‌ಗಳು ನಿರ್ಮಾಣವಾಗುತ್ತಿತ್ತು. ಪ್ರತಿದಿನ ಬಸಾಪುರದಿಂದ ಬೇಗೂರಿಗೆ ಮಾರ್ಗ ಕಲ್ಪಿಸುವ ರಸ್ತೆಯಲ್ಲಿ ನೂರಾರು ಸಿಮೆಂಟ್ ಕ್ರಷರ್ ಲಾರಿಗಳು ಓಡಾಟ ಮಾಡುತ್ತಿದ್ದವು. ಸೋಮವಾರ ಮುಂಜಾನೆ ಬಂದ ಕ್ರಷರ್ ಲಾರಿಗೆ ವಿದ್ಯುತ್ ತಂತಿ ಸಿಲುಕಿದೆ. ಆದರೆ ಚಾಲಕ ಅದನ್ನು ಗಮನಿಸದೇ ಸುಮಾರು ಒಂದು ಕಿಲೋಮೀಟರ್ ನಷ್ಟು ಎಳೆದುಕೊಂಡು ಹೋಗಿದ್ದಾನೆ.

ಈ ಸಂಧರ್ಭದಲ್ಲಿ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಬಿದ್ದಿದ್ದು, ಘಟನೆಯಿಂದ ನಾಲ್ಕೈದು ಮನೆಗಳಿಗೆ ಹಾನಿಯಾಗಿದೆ. ಅಷ್ಟೇ ಅಲ್ಲದೇ ಮನೆಯಲ್ಲಿದ್ದ ಓರ್ವ ಮಹಿಳೆ ಹಾಗೂ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿಯಾಗಿಲ್ಲ.

ಈ ವಿಷಯ ತಿಳಿದು ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಹಾಗೂ ಎಲೆಕ್ಟ್ರಾನಿಕ್ ಸಿಟಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *