ನಿಮಗೆ ಟಿಕೆಟ್ ನೀಡದಿದ್ದರೇ ಆತ್ಮಹತ್ಯೆ ಮಾಡ್ಕೊತೀನಿ: ರಮೇಶ್ ಕತ್ತಿ ಅಭಿಮಾನಿ

ಬೆಳಗಾವಿ: ನಿಮಗೆ ಟಿಕೆಟ್ ನೀಡದೆ ಇದ್ದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ರಮೇಶ್ ಕತ್ತಿಗೆ ಕರೆ ಮಾಡಿ, ಅಭಿಮಾನಿಯೋರ್ವ ಅಳಲು ತೋಡಿಕೊಂಡಿದ್ದಾನೆ.

ಹುಕ್ಕೇರಿ ತಾಲೂಕಿನ ಕೇಸ್ತಿ ಗ್ರಾಮದ ಶಶಿಕಾಂತ್ ರವಳೋಜಿ ಎಂಬ ಅಭಿಮಾನಿ ರಮೇಶ್ ಕತ್ತಿ ಅವರಿಗೆ ಕರೆ ಮಾಡಿ, ನಿಮಗೆ ಟಿಕೆಟ್ ನೀಡದೆ ಇದ್ದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಕತ್ತಿ ಅವರು, ನಿನ್ನ ಕಾಲಿಗೆ ಬೀಳುತ್ತೇನೆ ಹಾಗೆ ಮಾಡಬೇಡಿ. ಹಾಗೆ ಮಾಡುವುದು ಸರಿಯಿಲ್ಲ, ಅಂತಹ ನಿರ್ಧಾರ ಮಾಡಬೇಡಿ. ನಿಮ್ಮಂಥ ತಮ್ಮನ ಆಶೀರ್ವಾದ ಇದೆ. ಎಲ್ಲ ಕಡೆ ಟಿಕೆಟ್ ನೀಡುವಂತೆ ಒತ್ತಾಯ ಇದೆ. ನಾನು ಬೆಂಗಳೂರಿನಲ್ಲಿದ್ದೆ ಎಲ್ಲಾ ಸರಿ ಮಾಡಿಕೊಂಡು ಬರುತ್ತೆನೆ. ನನಗೆ ಟಿಕೆಟ್ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಎಂದು ಅಭಿಮಾನಿ ಬಳಿ ಮನವಿ ಮಾಡಿಕೊಂಡಿದ್ದಾರೆ.

ಈ ಸಂಭಾಷಣೆ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ರಮೇಶ್ ಕತ್ತಿ ಅವರಿಗೆ ಚಿಕ್ಕೋಡಿಯಿಂದ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿಯಿಂದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಗೊಂದಲ ವಿಚಾರ, ಅಣ್ಣಾಸಾಹೇಬ್ ಜೊಲ್ಲೆ ಹಾಗೂ ರಮೇಶ್ ಕತ್ತಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ನಡುವೆ ಬಿಜೆಪಿ ಕಾರ್ಯಕರ್ತರ ಮಧ್ಯೆ ಕೂಡ ನಮ್ಮ ನಾಯಕನಿಗೆ ಟಿಕೆಟ್ ನೀಡಬೇಕು ಎನ್ನುವ ಆಗ್ರಹ ಭುಗಿಲೆದ್ದಿದೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲೂ ಈ ಇಬ್ಬರು ನಾಯಕರ ಬೆಂಬಲಿಗರ ನಡುವೆಯೇ ಫುಲ್ ಫೈಟ್ ನಡೆಯುತ್ತಿದೆ.

Comments

Leave a Reply

Your email address will not be published. Required fields are marked *