ಇಂದು ಹಾಸನದಲ್ಲಿ ಪ್ರಜ್ವಲ್ ನಾಮಿನೇಷನ್ – ಬೆಳ್ಳಂಬೆಳಗ್ಗೆ ಟೆಂಪಲ್ ರನ್

ಹಾಸನ: ಇಂದು ಹಾಸನ ಲೋಕಸಭಾ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸಲಿದ್ದು, ತಂದೆ ಎಚ್‍ಡಿ ರೇವಣ್ಣ ಇಟ್ಟಿರುವ ಮುಹೂರ್ತ ಪ್ರಕಾರವೇ ಬೆಳಗ್ಗೆಯಿಂದಲೇ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.

ಬೆಳಗ್ಗೆಯೇ 5.30ಕ್ಕೆ ಹೊಳೆನರಸೀಪುರದಲ್ಲಿರುವ ಮನೆಯಲ್ಲಿ ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ಸಮ್ಮುಖದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಹೊಳೆನರಸೀಪುರದಲ್ಲಿರುವ ಲಕ್ಷ್ಮೀನರಸಿಂಹ ಸ್ವಾಮಿ, ಹರದನಹಳ್ಳಿಯ ದೇವೇಶ್ವರ ದೇವಸ್ಥಾನ, ಆಂಜನೇಯ ದೇಗುಲದಲ್ಲೂ ಪೂಜೆ ಸಲ್ಲಿಸಿದ್ರು.

ಬೆಳಗ್ಗೆ 9.30ರ ವೇಳೆಗೆ ಪೂಜೆ ಕಾರ್ಯಗಳು ಮುಗಿಯಲಿವೆ. ಬಳಿಕ ಹಾಸನಕ್ಕೆ ಬಂದು ನಗರದ ಎನ್‍ಆರ್ ಸರ್ಕಲ್‍ನಲ್ಲಿರುವ ಹೇಮಾವತಿ ಪ್ರತಿಮೆಯಿಂದ ರೋಡ್ ಶೋ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಮಧ್ಯಾಹ್ನ 12.05ರಿಂದ 12.45ರೊಳಗೆ ನಾಮಪತ್ರ ಸಲ್ಲಿಸಲಿದ್ದಾರೆ. ಹಾಸನ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.


ಪುತ್ರನ ನಾಮಪತ್ರಕ್ಕೆ `ವಾಸ್ತು’ ಮಂತ್ರ..!
ಪ್ರಜ್ವಲ್ ನಾಮಿನೇಷನ್‍ಗೆ ಇದೇ ದಿನ ಯಾಕೆ ಆಯ್ಕೆ ಮಾಡ್ಕೊಂಡ್ರು ಎಂದು ಚರ್ಚೆ ಶುರುವಾಗಿದೆ. ರೇವಣ್ಣ ವಾಸ್ತು ಪ್ರೀತಿ ಎಲ್ಲರಿಗೂ ಗೊತ್ತಿರೋದೇ. ಅದೆಷ್ಟರ ಮಟ್ಟಿಗೆ ಅಂದ್ರೆ ಈ ಹಿಂದೆ ಕಟ್ಟಡವೊಂದರ ಶಂಕುಸ್ಥಾಪನೆ ವೇಳೆ ಪೂಜಾರಿಗೆಯೇ ಪಾಠ ಮಾಡಿದ್ದರು. ಆ ಬಳಿಕ ಬಜೆಟ್ ಇರಲಿ, ಕಾಮಗಾರಿ ಉದ್ಘಾಟನೆ ಇರಲಿ, ಖಾಸಗಿ ಕೆಲಸಗಳೇ ಇರಲಿ. ರೇವಣ್ಣ ವಾಸ್ತು, ಮುಹೂರ್ತ ಎಲ್ಲವೂ ನೋಡೇ ನೋಡ್ತಾರೆ. ಹಾಗೆಯೇ ಇದೀಗ ಪುತ್ರ ಪ್ರಜ್ವಲ್ ನಾಮಪತ್ರ ಸಲ್ಲಿಕೆಗೆ ಕೂಡ ಇವರೇ ಮುಹೂರ್ತ ಇಟ್ಟಿದ್ದಾರೆ. ಎಲ್ಲಾ ಶುಭಕಾರ್ಯಗಳನ್ನು ಶುಕ್ರವಾರವೇ ಮಾಡೋ ರೇವಣ್ಣ, ಮಗನ ನಾಮಪತ್ರ ಸಲ್ಲಿಕೆಗೂ ಶುಕ್ರವಾರವನ್ನೇ ಆಯ್ದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Comments

Leave a Reply

Your email address will not be published. Required fields are marked *