ಕಾಲಿಗೆ ಬೀಳಲು ಮುಂದಾದ ಪ್ರಜ್ವಲ್‍ಗೆ ಕಾಂಗ್ರೆಸ್ ಮುಖಂಡ ಸಲಹೆ

ಹಾಸನ: ತನ್ನ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳಲು ಮುಂದಾದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಕಾಂಗ್ರೆಸ್ ಮುಖಂಡ ಸಿ.ಎಸ್ ಪುಟ್ಟೇಗೌಡ ಸಲಹೆ ನೀಡಿದ್ದಾರೆ.

ದೇವರಿಗೆ ಪೂಜೆ ಮಾಡೋದಕ್ಕೆ ಹೋದಾಗ ಕಾಲಿಗೆ ನಮಸ್ಕಾರ ಮಾಡು. ಆದರೆ ವೋಟು ಕೇಳೋದಕ್ಕೆ ಹೋದಾಗ ನಮಸ್ಕಾರ ಮಾಡಬೇಡ. ಹೀಗೆ ಮಾಡಿದ್ದಲ್ಲಿ ಜನ ಲೀಡರ್ ಎಂದು ನಿನ್ನನ್ನು ಒಪ್ಪಿಕೊಳ್ಳೋದಿಲ್ಲ ಎಂದು ಸಲಹೆ ನೀಡಿದ್ರು. ದಶಕಗಳ ಕಾಲ ಜೆಡಿಎಸ್‍ನಲ್ಲೇ ಇದ್ದ ಪುಟ್ಟೇಗೌಡ ಪ್ರಜ್ವಲ್‍ರನ್ನು ಬೆಂಬಲಿಸುವುದಾಗಿ ಹೇಳಿದರು.

ಸಚಿವ ರೇವಣ್ಣ ಕುಟುಂಬ ಇಂದು ಕಾಂಗ್ರೆಸ್ ಮುಖಂಡ ಸಿ.ಎಸ್ ಪುಟ್ಟೇಗೌಡ ಅವರನ್ನು ಭೇಟಿ ಮಾಡಿತ್ತು. ಚನ್ನರಾಯಪಟ್ಟಣದಲ್ಲಿರುವ ಸಿ.ಎಸ್ ಪುಟ್ಟೇಗೌಡ ನಿವಾಸಕ್ಕೆ ಭೇಟಿ ಕೊಟ್ಟ ವೇಳೆ ಪ್ರಜ್ವಲ್, ಪುಟ್ಟೇಗೌಡ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳಲು ಮುಂದಾದ್ರು. ಪುಟ್ಟೇಗೌಡರು ಕಾಲಿಗೆ ಬೀಳೋದು ಬೇಡವೆಂದರೂ ಪ್ರಜ್ವಲ್ ತಾಯಿ ಭವಾನಿ ರೇವಣ್ಣ, ಆಶೀರ್ವಾದ ತೆಗೆದುಕೊ ಎಂದು ಒತ್ತಾಯಿಸಿದ್ದಾರೆ. ಈ ವೇಳೆ ಪುಟ್ಟೇಗೌಡರು ಈ ಸಲಹೆ ನೀಡಿದ್ದಾರೆ.

ಕಾಂಗ್ರೆಸ್ ಮುಖಂಡ ಸಿ.ಎಸ್ ಪುಟ್ಟೇಗೌಡರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರವಣಬೆಳಗೊಳದಿಂದ ಸ್ಪರ್ಧಿಸಿ ಸೋತಿದ್ದರು.

Comments

Leave a Reply

Your email address will not be published. Required fields are marked *