ಕುತೂಹಲಕ್ಕೆ ಕಾರಣವಾಯ್ತು ಕಾಂಗ್ರೆಸ್ಸಿನ ರಮೇಶ್‍ಬಾಬು ಬಂಡಿಸಿದ್ದೇಗೌಡ ನಡೆ

ಮಂಡ್ಯ: ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ರಮೇಶ್‍ಬಾಬು ಬಂಡಿಸಿದ್ದೇಗೌಡರ ನಡೆ ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ರಮೇಶ್‍ಬಾಬು ಬಂಡಿಸಿದ್ದೇಗೌಡ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆದರೆ ಮಂಗಳವಾರ ಸುಮಲತಾ ಅಂಬರೀಶ್ ಬಾಡಿಗೆ ಮನೆ ವೀಕ್ಷಣೆ ವೇಳೆ ಅವರ ಜೊತೆಗೆ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಇವರ ನಡೆಯ ಬಗ್ಗೆ ಜನರಲ್ಲಿ ಕುತೂಹಲ ಮೂಡಿದೆ.

ರಾತ್ರಿ ಮಂಡ್ಯದ ಚಾಮುಂಡೇಶ್ವರಿ ನಗರದ 3ನೇ ಕ್ರಾಸ್ ನಲ್ಲಿರುವ ಅಂಬಿ ಲಕ್ಕಿ ಮನೆಗೆ ಸುಮಲತಾ ಭೇಟಿ ನೀಡಿದ್ದರು. ಈ ವೇಳೆ ಸುಮಲತಾ ಜೊತೆ ಬಂಡಿಸಿದ್ದೇಗೌಡ ಕೂಡ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲದೆ ಮನೆ ಮಾಲೀಕರ ಜೊತೆ ಚರ್ಚೆ ನಡೆಸಿ ಈ ವಾರದೊಳಗೆ ಮನೆ ಬಾಡಿಗೆ ಪಡೆದು, ಪ್ರವೇಶ ಮಾಡುವ ಕುರಿತು ಚರ್ಚೆ ಮಾಡಿದ್ದಾರೆ.

ಈ ಹಿಂದೆ ರಮೇಶ್‍ಬಾಬು ಜೆಡಿಎಸ್ ಪಕ್ಷದಲ್ಲಿ ಎರಡು ಬಾರಿ ಎಂಎಲ್‍ಎ ಆಗಿದ್ದರು. ಒಮ್ಮೆ ತಮ್ಮ ಪ್ರತಿಸ್ಪರ್ಧಿ ಅಂಬರೀಶ್ ಅವರನ್ನೂ ಸೋಲಿಸಿದ್ದರು. ಕಳೆದ ಬಾರಿ ಜೆಡಿಎಸ್ ಪಕ್ಷದ ವರಿಷ್ಠರ ಜೊತೆ ಮುನಿಸಿಕೊಂಡು ಕಾಂಗ್ರೆಸ್ ಸೇರಿ ಸೋಲು ಕಂಡಿದ್ದರು. ತಮ್ಮ ಸೋಲಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಕಾರಣ ಎಂದು ಸಿಟ್ಟಿನಲ್ಲಿದ್ದರು ಎಂದು ಹೇಳಲಾಗುತ್ತಿತ್ತು.

ಈಗ ಲೋಕಸಭಾ ಚುನಾವಣೆಗೆ ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗೋದು ಖಚಿತವಾಗಿದೆ. ತಮ್ಮ ಸೋಲಿನ ಸೇಡು ತೀರಿಸಿಕೊಳ್ಳಲು ಬಹಿರಂಗವಾಗಿಯೇ ಕಾಂಗ್ರೆಸ್ ಮುಖಂಡ ಸುಮಲತಾ ಪರವಾಗಿ ನಿಂತಿದ್ದು, ಬಹಿರಂಗವಾಗಿ ಅವರ ಜೊತೆ ಓಡಾಡುತ್ತಾ ರಾಜಕೀಯವಾಗಿ ಸಹಕಾರ ನೀಡುತ್ತಿದ್ದಾರೆ ಎಂಬುದಾಗಿ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *