ಕೊಡುವುದಾದ್ರೆ ಮೈಸೂರು ಬಿಟ್ಟುಕೊಡಿ- `ಕೈ’ ಹೈಕಮಾಂಡ್ ವಿರುದ್ಧ ಎಚ್‍ಡಿಡಿ ಗುಡುಗು

ಬೆಂಗಳೂರು: ಲೋಕಸಭಾ ಚುನಾವಣೆಯ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ದೋಸ್ತಿ ಸರ್ಕಾರದಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದಕ್ಕೆ ಪೂರಕವೆಂಬಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ತನಗೆ ಮೈಸೂರು ಕ್ಷೇತ್ರವೇ ಬೇಕು ಎಂದು ಹಠ ಹಿಡಿಯುತ್ತಿದ್ದಾರೆ.

ಈ ಚುನಾವಣೆಯಲ್ಲಿ ಕೊಡುವುದಾದ್ರೆ ಮೈಸೂರು ಬಿಟ್ಟು ಕೊಡಿ. ಸಿದ್ದರಾಮಯ್ಯ ಜಿಲ್ಲೆಯನ್ನ ಬಿಟ್ಟು ಕೊಟ್ರೆ ಮಾತ್ರ ನಾನು ಎಲೆಕ್ಷನ್‍ಗೆ ನಿಲ್ಲುತ್ತೇನೆ. ನಾನು ನಿಲ್ಲೋದಾದ್ರೆ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಮಾತ್ರ. ಸಿದ್ದರಾಮಯ್ಯ ಜಿಲ್ಲೆ ಬಿಟ್ಟು ನನಗೆ ಬೇರೆ ಯಾವ ಕ್ಷೇತ್ರದಲ್ಲೂ ನಿಲ್ಲಲು ಮನಸ್ಸಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಮುಂದೆ ಮಾಜಿ ಪ್ರಧಾನಿ ದೇವೇಗೌಡ ಗುಡುಗಿದ್ದಾರೆ ಎಂದು ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

ಹಾಸನ ಕ್ಷೇತ್ರವನ್ನು ದೇವೇಗೌಡರು ಈಗಾಗಲೇ ಮೊಮ್ಮಗ ಪ್ರಜ್ವಲ್ ರೇವಣ್ಣರಿಗೆ ಬಿಟ್ಟುಕೊಟ್ಟಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‍ನ 5 ಶಾಸಕರು, ಜೆಡಿಎಸ್‍ನ ಇಬ್ಬರು ಶಾಸಕರಿದ್ದಾರೆ. ಇದರಲ್ಲಿ ಹೆಬ್ಬಾಳ, ಕೆ.ಆರ್.ಪುರಂ ಕ್ಷೇತ್ರದ ಶಾಸಕರು ಸಿದ್ದರಾಮಯ್ಯ ಪಕ್ಕಾ ಶಿಷ್ಯ. ಅಲ್ಲದೆ ಈ ಕ್ಷೇತ್ರದಲ್ಲಿ ಕುರುಬ ಮತದಾರರು ಕೂಡ ನಿರ್ಣಾಯಕ ಪಾತ್ರ ವಹಿಸ್ತಾರೆ. ಒಂದು ವೇಳೆ ದೇವೇಗೌಡರು ಸ್ಪರ್ಧೆ ಮಾಡಿದ್ರೆ ಜೆಡಿಎಸ್‍ಗೆ ಒಳಏಟು ಬೀಳುವ ಆತಂಕ ಎದುರಾಗಿದೆ ಎನ್ನಲಾಗಿದೆ.

ಇತ್ತ ಮೈಸೂರನ್ನು ಕಾಂಗ್ರೆಸ್ ಪಡೆದುಕೊಂಡರೆ ಸಿದ್ದರಾಮಯ್ಯ ವರ್ಚಸ್ಸು ಹೆಚ್ಚಾಗುವ ಲೆಕ್ಕಚಾರವಾಗಿದ್ದು, ಬೆಂಗಳೂರು ಉತ್ತರದಲ್ಲಿ ದೇವೇಗೌಡರನ್ನು ನಿಲ್ಲಿಸಿದ್ರೆ ಚಾಮುಂಡೇಶ್ವರಿ ಸೋಲಿನ ಸೇಡು ಚುಕ್ತಾವಾಗಲಿದೆ. ಈ ಮೂಲಕ ಕಾಂಗ್ರೆಸ್, ಜೆಡಿಎಸ್ ವಲಯದಲ್ಲಿ ಲೆಕ್ಕಚುಕ್ತಾ ಲೆಕ್ಕಚಾರ ಭರ್ಜರಿಯಾಗಿ ನಡೆಯುತ್ತಿದೆ ಎಂಬುದಾಗಿ ತಿಳಿದುಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *