ನೀವೆಲ್ಲಾ ನನ್ನನ್ನು ಏನ್ ಅಂದುಕೊಂಡಿದ್ದೀರಿ: ಕೈ ಸಭೆಯಲ್ಲಿ ಸಿದ್ದರಾಮಯ್ಯ ಕೆಂಡಾಮಂಡಲ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಗರಂ ಆಗಿದ್ದಾರೆ.

ಹೌದು. ಸೋಮವಾರ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್ ಸ್ಕ್ರಿನಿಂಗ್ ಸಮಿತಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಯಾವ ಕ್ಷೇತ್ರವನ್ನು ಬಿಟ್ಟು ಕೊಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಮಂಡ್ಯದ ಜೊತೆ ಮೈಸೂರು ಕ್ಷೇತ್ರವನ್ನು ನೀಡಬಹುದೇ? ನೀಡಿದರೆ ಕಾಂಗ್ರೆಸ್ಸಿಗೆ ಏನು ಲಾಭ, ನಷ್ಟದ ಬಗ್ಗೆ ನಾಯಕರು ಚರ್ಚೆ ನಡೆಸಿದರು.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮೈಸೂರು ಕ್ಷೇತ್ರವನ್ನು ಜೆಡಿಎಸ್ಸಿಗೆ ಬಿಟ್ಟು ಕೊಡಬಹುದೇ ಎಂದು ಪ್ರಶ್ನಿಸಿದಾಗ ಸಿದ್ದರಾಮಯ್ಯ ಫುಲ್ ಗರಂ ಆಗಿದ್ದಾರೆ. ಇದ್ಯಾವ ಕಾಂಪ್ರೊಮೈಸ್ ಪಾಲಿಟಿಕ್ಸ್? ಹಿಂಗಾದ್ರೆ ಕಷ್ಟವಾಗುತ್ತದೆ. ನನ್ನನ್ನು ಯಾಕೆ ಈ ಸಭೆಗೆ ಕರೆದಿದ್ದೀರಿ ಎಂದು ಪ್ರಶ್ನಿಸಿ ಸಿದ್ದರಾಮಯ್ಯ ನಾಯಕರ ವಿರುದ್ಧವೇ ಫುಲ್ ಗರಂ ಆದರು ಎಂದು ಕಾಂಗ್ರೆಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಏನ್ರೀ.. ನೀವೆಲ್ಲಾ ನನ್ನನ್ನು ಏನು ಅಂತ ಅಂದುಕೊಂಡಿದ್ದೀರಿ. ಮೈಸೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡೋಕೆ ಆಗುತ್ತಾ? ಅವರಿಗೆ ಎಲ್ಲ ಬಿಟ್ಟು ಕೊಟ್ಟರೆ ನಾವು ಪಾಲಿಟಿಕ್ಸ್ ಮಾಡೋಕೆ ಆಗುತ್ತಾ? ಮಂಡ್ಯ, ಹಾಸನವನ್ನು ಈಗಾಗಲೇ ಕೊಟ್ಟಿದ್ದೇವೆ. ಈಗ ಮೈಸೂರು ಕೊಡುತ್ತೀರಾ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ.

ನಾನು ತಲೆ ಎತ್ತಿಕೊಂಡು ಮೈಸೂರಲ್ಲಿ ಓಡಾಡೋಕೆ ಆಗಲ್ಲ. ಈಗಾಗಲೇ ಜಿ.ಟಿ.ದೇವೇಗೌಡ, ಸಾ.ರಾ. ಮಹೇಶ್ ಅವರನ್ನು ಹಿಡಿಯಲು ಆಗುತ್ತಿಲ್ಲ. ನಾಳೆ ಮೈಸೂರಲ್ಲಿ ಏನಾದ್ರೂ ಅವರು ಗೆದ್ದು ಬಿಟ್ಟರೆ ಮಹಾರಾಜರಂತೆ ಮೆರೆದಾಡುತ್ತಾರೆ. ಮೈಸೂರಲ್ಲಿ ಫ್ರೆಂಡ್ಲಿ ಪಾಲಿಟಿಕ್ಸ್ ಆಗಲಿ. ನಾನು ಗೆದ್ದು ತೋರಿಸುತ್ತೇನೆ ಎಂದು ಸಭೆಯಲ್ಲಿ ಮಾಜಿ ಸಿಎಂ ಏರು ಧ್ವನಿಯಲ್ಲೇ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *