ಜಾಮೀನು ಬೇಕಾದ್ರೆ ಹುತಾತ್ಮ ಯೋಧರ ಕುಟುಂಬಕ್ಕೆ 1 ಲಕ್ಷ ನೀಡಿ: ತೆಲಂಗಾಣ ಹೈಕೋರ್ಟ್

ಹೈದರಾಬಾದ್: ಜಾಮೀನು ಬೇಕಾದರೆ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ 1 ಲಕ್ಷ ರೂ. ನೆರವನ್ನು ನೀಡಿ ಎಂದು ತೆಲಂಗಾಣ ಹೈಕೋರ್ಟ್ ಆರೋಪಿಗಳಿಗೆ ಸೂಚಿಸಿದೆ.

14 ಸಾವಿರ ಹೂಡಿಕೆದಾರರಿಗೆ ಮೋಸ ಮಾಡಿರುವ ಆರೋಪದ ಮೇಲೆ ಸನ್ ಪರಿವಾರ್ ಗ್ರೂಪ್‍ನ ಆಯೋಜಕರ ಮೇಲೆ ಪ್ರಕರಣ ದಾಖಲಾಗಿತ್ತು. ಹೂಡಿಕೆದಾರರಿಗೆ ಸುಮಾರು 150 ಕೋಟಿ ರೂ. ನಷ್ಟು ಹಣವನ್ನು ಈ ಕಂಪನಿ ವಂಚಿಸಿತ್ತು. ಆದರಿಂದ ಕಳೆದ ವರ್ಷ ಈ ಕಂಪನಿ ಮೇಲೆ ವಂಚನೆ ಕೇಸ್ ದಾಖಲಾಗಿತ್ತು. ಅಲ್ಲದೆ, ವಂಚಿಸಿದ್ದ ಆರೋಪಿಗಳನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕೆಂಬ ಷರತ್ತಿನ ಮೇರೆಗೆ ಅವರಿಗೆ ಜಾಮೀನು ಮಂಜೂರು ಮಾಡಲಾಗಿತ್ತು.

ಆರೋಪಿಗಳು ತನಿಖೆಗೆ ಸರಿಯಾಗಿ ಹಾಜರಾಗದ ಕಾರಣ ಅವರ ಜಾಮೀನು ರದ್ದುಗೊಳಿಸಲಾಗಿತ್ತು. ರದ್ದಾದ ಹಿನ್ನೆಲೆಯಲ್ಲಿ ಆರೋಪಿಗಳು ಮತ್ತೆ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದರು.

ಈ ಅರ್ಜಿ ವಿಚಾರಣೆ ವೇಳೆ ನ್ಯಾ.ಬಿ. ಶಿವಶಂಕರ್ ಅವರು ಎಲ್ಲಾ ಆರೋಪಿಗಳು ತಮಗೆ ಜಾಮೀನು ಬೇಕಿದ್ದರೆ ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ 1 ಲಕ್ಷ ರೂ. ಸಹಾಯಧನ ನೀಡಿದರೆ ಮಾತ್ರ ಮಂಜೂರು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ, ತನಿಖಾಧಿಕಾರಿಗಳು ವಿಚಾರಣೆಗೆ ಕರೆದಾಗ ಅವರಿಗೆ ಸಹಕರಿಸಬೇಕೆಂದು ಸೂಚಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *