ಸ್ವಲ್ಪ ದಿನದಲ್ಲಿ ಪ್ರಾಣಿಗಳು ಹಳ್ಳಿಗಳಿಗೆ ನುಗ್ಗುತ್ತವೆ, ಎಲ್ಲರು ತಯಾರಾಗಿರಿ: ದರ್ಶನ್

ಬೆಂಗಳೂರು: ಬಂಡೀಪುರ ಹುಲಿರಕ್ಷಿತಾರಣ್ಯ ಉಂಟಾಗಿರುವ ಕಾಡ್ಗಿಚ್ಚಿನಿಂದ ಸಾಕಷ್ಟು ವನ್ಯಜೀವಿ ಸಂಕುಲಕ್ಕೆ ತೊಂದರೆಯಾಗಿದ್ದು, ಇನ್ನೂ ಸ್ವಲ್ಪ ದಿನದಲ್ಲಿ ಪ್ರಾಣಿಗಳು ಹಳ್ಳಿಗಳಿಗೆ ನುಗ್ಗುತ್ತೆ, ಎಲ್ಲರು ತಯಾರಾಗಿರಿ ಎಂದು ದರ್ಶನ್ ಹೇಳಿದ್ದಾರೆ.

ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಬಂಡೀಪುರದಲ್ಲಿ ಬೆಂಕಿ ಬಿದ್ದು 42 ಸಾವಿರ ಎಕ್ರೆ ಕಾಡು ಸುಟ್ಟು ಹೋಗಿದೆ. 42 ಸಾವಿರ ಕಾಡು ಎಕ್ರೆ ಕಾಡು ಬೆಳೆಯೋಕೆ ಎಷ್ಟು ಕಷ್ಟ. ಕಾಡಿಗೆ ಬೆಂಕಿ ಬಿದ್ದಾಗ ಪ್ರಾಣಿಗಳು ಓಡಿ ಹೋಗುತ್ತೆ. ಒಂದು ಗಂಡು ಹುಲಿ 12 ಕಿ.ಮೀ ಓಡುತ್ತೆ. ಅದರಲ್ಲಿ ನಾಲ್ಕು ಹೆಣ್ಣು ಹುಲಿಗಳು ಇರುತ್ತೆ. ಹುಲಿ ಓಡುವಾಗ ಮತ್ತೊಂದು ಹುಲಿ ಎದುರಿಗೆ ಬಂದರೆ ಅದು ಜಗಳವಾಡುತ್ತೆ. ಆಗ ಕಾಡು ಕೂಡ ನಾಶವಾಗುತ್ತೆ ಹಾಗೂ ಹುಲಿ ಕೂಡ ಸಾವನ್ನಪ್ಪುತ್ತದೆ. ಇದಕ್ಕೆ ಯಾರು ಹೊಣೆ ಎಂದು ದರ್ಶನ್ ಪ್ರಶ್ನಿಸಿದ್ದಾರೆ.

ಕಾಡು ಹೋಯಿತು ಎಂದು ಎಲ್ಲರು ಯೋಚನೆ ಮಾಡಿ. ಇನ್ನೂ ಸ್ವಲ್ಪ ದಿನದಲ್ಲಿ ಪ್ರಾಣಿಗಳು ಹಳ್ಳಿಗಳಿಗೆ ನುಗ್ಗುತ್ತೆ. ಎಲ್ಲರು ತಯಾರಾಗಿರಿ. ಏಕೆಂದರೆ ಹುಲಿಗಳಿಗೆ ತಿನ್ನಲು ಏನು ಇಲ್ಲ. ಆಗ ನಾವು ಅರಣ್ಯ ಸಿಬ್ಬಂದಿಯನ್ನು ಕರೆಸಬೇಕು. ಆಗ ಅವರು ಪ್ರಾಣಿಗಳನ್ನು ಶೂಟ್ ಮಾಡುತ್ತಾರೆ, ಇಲ್ಲ ನಾವು ಶೂಟ್ ಮಾಡಬೇಕಾಗುತ್ತೆ. ಅರಣ್ಯ ಸಿಬ್ಬಂದಿಯವರು ಪ್ರಾಣಿಗಳನ್ನು ಸ್ಥಳಾಂತರಿಸೋಕ್ಕೆ ಆಗಲ್ಲ. ಸ್ಥಳಾಂತರಗೊಂಡರೆ ಪ್ರಾಣಿಗಳು ಬದುಕುವುದಿಲ್ಲ ಎಂದರು.

ಈ ಹಿಂದೆ ಕೂಡ ದರ್ಶನ್ ಅವರು ಟ್ವಿಟ್ಟರಿನಲ್ಲಿ, “ಬಂಡೀಪುರ ಅಭಯಾರಣ್ಯದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದ ಸಾಕಷ್ಟು ವನಜೀವಿ ಸಂಕುಲಕ್ಕೆ ತೊಂದರೆಯುಂಟಾಗಿದೆ. ಸರ್ಕಾರ, ಅರಣ್ಯ ಇಲಾಖೆ ಹಾಗೂ ಹಲವಾರು ಸ್ವಯಂಸೇವಕರು ಜೊತೆಗೂಡಿ ಈ ಅವಘಡವನ್ನು ಶಮನ ಮಾಡಲು ಯತ್ನಿಸುತ್ತಿದ್ದಾರೆ. ಆಸಕ್ತಿಯುಳ್ಳ ಸ್ವಯಂಸೇವಕರು ದಯಮಾಡಿ ಈ ಅಭಿಯಾನದಲ್ಲಿ ನೆರವಾಗಬೇಕಾಗಿ ವಿನಂತಿ” ಎಂದು ಟ್ವೀಟ್ ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *