ಮಗ ಮೃತಪಟ್ಟು 6 ತಿಂಗಳ ಬಳಿಕ ಪೋಷಕರು ಬೆಂಕಿ ಹಂಚಿಕೊಂಡು ಆತ್ಮಹತ್ಯೆ

ಚೆನ್ನೈ: ಏಕೈಕ ಮಗ ಮೃತಪಟ್ಟು ಆರು ತಿಂಗಳ ಬಳಿಕ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

ತಂಗಮುತ್ತು(62) ಹಾಗೂ ವಲ್ಲಿಯಮ್ಮಲ್(57) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಂಪತಿ. ದಂಪತಿ ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿ ತಮ್ಮ ಮಗ ಚಂದ್ರಶೇಖರ್ ಹಾಗೂ ಮಮ್ಮೊಗ ತರುಣ್ ಜೊತೆ ವಾಸಿಸುತ್ತಿದ್ದರು. ಚಂದ್ರಶೇಖರ್ ಪತ್ನಿ ತನ್ನ ಪತಿ ಹಾಗೂ 10 ವರ್ಷದ ಮಗನನ್ನು ಬಿಟ್ಟು ಬೇರೆ ವ್ಯಕ್ತಿ ಜೊತೆ ಓಡಿ ಹೋಗಿದ್ದಳು. ಬಳಿಕ ಚಂದ್ರಶೇಖರ್ ಕಿಡ್ನಿ ವೈಫಲ್ಯದಿಂದ 6 ತಿಂಗಳ ಹಿಂದೆ ಮೃತಪಟ್ಟಿದ್ದನು.

ತಂಗಮುತ್ತು ಹಾಗೂ ವಲ್ಲಿಯಮ್ಮಲ್ ಇಬ್ಬರು ತಮ್ಮ ಮಗನ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೇ ತಂಗಮುತ್ತು ಡಯಾಬಿಟಿಸ್‍ನಿಂದ ಬಳಲುತ್ತಿದ್ದರು. ಇತ್ತೀಚೆಗೆ ತಂಗಮುತ್ತು ಆರೋಗ್ಯದಲ್ಲಿ ಏರಾಪೇರಾಗಿದ್ದು, ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗಿದ್ದರು. ಆಗ ವೈದ್ಯರು ತಂಗಮುತ್ತುಗೆ ಆಸ್ಪತ್ರೆಯಲ್ಲಿ ದಾಖಲಾಗುವಂತೆ ಹೇಳಿದ್ದರು. ಹಣಕಾಸಿನ ಸಮಸ್ಯೆಯಿಂದ ತಂಗಮುತ್ತು ಆಸ್ಪತ್ರೆಗೆ ದಾಖಲಾಗದೇ ಮನೆಗೆ ಹಿಂತಿರುಗಿದ್ದರು.

ಸೋಮವಾರ ದಂಪತಿ ತಮ್ಮ ಮೊಮ್ಮಗ ತರುಣ್‍ನನ್ನು ಹೊರಗೆ ಕಳುಹಿಸಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಮನೆಯಿಂದ ಬೆಂಕಿ ಹಾಗೂ ಹೊಗೆ ಬರುತ್ತಿರುವುದನ್ನು ಗಮನಿಸಿದ ತರುಣ್ ತಕ್ಷಣ ಮನೆಯ ಒಳಗಡೆ ಓಡಿ ಹೋಗಿ ಬೆಂಕಿಯನ್ನು ಲೆಕ್ಕಿಸದೇ ಅಜ್ಜಿ-ತಾತರನ್ನು ರಕ್ಷಿಸಲು ಮುಂದಾಗಿದ್ದಾನೆ. ಈ ವೇಳೆ ದಂಪತಿ ಆತನನ್ನು ದೂರ ತಳ್ಳಿದ್ದಾರೆ. ಆಗ ತರುಣ್ ಮನೆ ಹೊರಗೆ ಬಂದು ಸಹಾಯಕ್ಕಾಗಿ ಕೇಳಿಕೊಂಡಿದ್ದಾನೆ. ಬಳಿಕ ಅಕ್ಕಪಕ್ಕದ ಮನೆಯವರು ಬೆಂಕಿ ನಂದಿಸಿ ದಂಪತಿಯನ್ನು ರಕ್ಷಿಸಿದ್ದರು.

ದಂಪತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಇಬ್ಬರು ಮೃತಪಟ್ಟಿದ್ದು, ತರುಣ್ ಬೆಂಕಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಈ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *