ಮಗುವನ್ನು ಹೆರುವಾಗ ತಾಯಿ ಪಡುವ ನೋವಿನಂತೆ ಮೈತ್ರಿ ಸರ್ಕಾರ: ಸಿಎಂ ಎಚ್‍ಡಿಕೆ

ಮಂಡ್ಯ: ಜಿಲ್ಲೆಯ ಅಭಿವೃದ್ಧಿಗೆ ಭಾರೀ ಬಹುಮತದಲ್ಲಿ ಮತದಾರರು ನಮಗೇ ಆಶೀರ್ವಾದ ಮಾಡಿದ್ದಾರೆ. ನನ್ನ ಮೇಲೆ ಜಿಲ್ಲೆ ಜನ ಅವರ ಋಣಭಾರ ಇದೆ. ಆದರಿಂದ ಕಳೆದ 25 ವರ್ಷದಿಂದ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕಿದೆ. ಜಿಲ್ಲೆಯ ಅಭಿವೃದ್ಧಿಯೊಂದಿಗೆ ರಾಜ್ಯದ ಸಮಗ್ರ ಅಭಿವೃದ್ಧಿ ನನಗೆ ಜವಾಬ್ದಾರಿ ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಸುವುದು ಮಗುವನ್ನು ಹೆರುವಾಗ ತಾಯಿ ಪಡುವ ನೋವಿನಂತೆ ಇರುತ್ತದೆ. ಆದರೆ ಮಗುವಾದಾಗ ತೃಪ್ತಿ ಇರುತ್ತೆ. ಆದೇ ರೀತಿ ಸಮ್ಮಿಶ್ರ ಸರ್ಕಾರದ ಆಡಳಿತ ನಮಗೇ ತೃಪ್ತಿ ಇದೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಗೆ ಬಜೆಟ್ ಮಾತ್ರವಲ್ಲದೇ ಕೆಲವು ಸ್ವತಂತ್ರ ನಿರ್ಧಾರಗಳನ್ನು ಕೈಗೊಂಡು ಕೆಲವು ಯೋಜನೆಗಳನ್ನು ಜಾರಿ ಮಾಡಿದ್ದೇನೆ. ಆದರೆ ಈ ಮೊತ್ತವನ್ನು ನಾನು ಹೇಳಿದರೆ ಬೇರೆ ಕಡೆ ಶುರುವಾಗುತ್ತೆ. ಆದ್ದರಿಂದ ಹಾಗಾಗಿ ಹೇಳಲೋ ಬೇಡವೋ ಎಂಬಂತಾಗಿದೆ. ಕುಮಾರಣ್ಣ ಮಂಡ್ಯಗೆ ಮಾತ್ರ ಕೊಟ್ಟಿದ್ದಾರೆ ಎಂಬ ಪ್ರಶ್ನೆ ಬರದಂತೆ ಎಲ್ಲಾ ಜಿಲ್ಲೆಗಳಲ್ಲೂ ಕೆಲ ಸಂಸ್ಥೆಗಳನ್ನು ಆರಂಭಿಸಲು ಉದ್ದೇಶಿಸಿದ್ದೇನೆ. ಮುಂದಿನ ತಿಂಗಳಿನಿಂದ ಈ ಯೋಜನೆಗಳ ಜಾರಿ ಆರಂಭವಾಗುತ್ತದೆ. ಕೈಗಾರಿಕೆಗಳ ಅಭಿವೃದ್ಧಿಯಿಂದ ಪ್ರತಿ ಜಿಲ್ಲೆಯ ಆಯಾ ಜಿಲ್ಲೆಯ ಯುವ ಸಮುದಾಯಕ್ಕೆ ಉದ್ಯೋಗ ಲಭಿಸಲಿದೆ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಒಟ್ಟಾರೆ ಸುಮಾರು 603 ಕೋಟಿ ರೂ. ವೆಚ್ಚದಲ್ಲಿ ಮೊದಲನೇ ಹಂತದ ಕಾಮಗಾರಿಗಳಿಗೆ ಈ ವಾರದಲ್ಲಿ ಚಾಲನೆ ನೀಡುತ್ತೇನೆ. ಫೆಬ್ರವರಿ 27 ರಂದು ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಮಂಡ್ಯದಲ್ಲಿ ಸರ್ಕಾರಿ ಕಾರ್ಯಕ್ರಮ ಆಯೋಜಿಸಲು ಸೂಚನೆ ನೀಡಲಾಗಿದೆ. ಸರ್ಕಾರದಲ್ಲಿ ಹಣದ ಕೊರತೆಯಿಲ್ಲ. ಸಾಲಮನ್ನಾಕ್ಕೂ ವಿವಿಧ ಯೋಜನೆಗಳಿಗೆ ಹಣ ಬಿಡುಗಡೆಗೂ ಕೊರತೆಯಿಲ್ಲ. ಒಟ್ಟಾರೆ ವಿವಿಧ ಇಲಾಖೆಗಳಿಗೆ ಸೇರಿದಂತೆ ಇದೇ ತಿಂಗಳು 27 ರಂದು ಸರ್ಕಾರಿ ಕಾರ್ಯಕ್ರಮ ಮಾಡಿ ಮಂಡ್ಯ ಜಿಲ್ಲೆಗೆ ಒಟ್ಟು 5 ಸಾವಿರ ಕೋಟಿ ರೂ. ಮಿಗಿಲಾದ ಯೋಜನೆಗಳನ್ನು ಜಾರಿಗೆ ತರಲಾಗುತ್ತೆ ಎಂದು ತಿಳಿಸಿದರು.

ಇದೇ ವೇಳೆ ಸಮ್ಮಿಶ್ರ ಸರ್ಕಾರಕ್ಕೆ ನೀಡುವ ಡೆಡ್ ಲೈನ್‍ಗಳ ಕುರಿತು ಪ್ರಶ್ನೆಗೆ ಉತ್ತರಿಸಿದ ಸಿಎಂ, ಸರ್ಕಾರಕ್ಕೆ ಡೆಡ್ ಲೈನ್ ಕೊಡುವವಳು ತಾಯಿ ಚಾಮುಂಡೇಶ್ವರಿ. ಮನುಷ್ಯರು ಕೊಡುವ ಡೆಡ್ ಲೈನ್‍ಗೆ ನಾನು ಏಕೆ ಹೆದರಲಿ ಎಂದು ವ್ಯಂಗ್ಯವಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *