ಕೆಲಸದಿಂದ ತೆಗೆದಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆಗೈದ ಆರೋಪಿ ಅರೆಸ್ಟ್

ಬೆಂಗಳೂರು: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಮಾಲೀಕನ ಮೇಲೆ ಲಾಂಗ್‍ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿ ಹಾಗೂ ಆತನಿಗೆ ಸಾಥ್ ನೀಡಿದ್ದವನನ್ನು ಬೇಗೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬೊಮ್ಮನಹಳ್ಳಿಯ ರೌಡಿಶೀಟರ್ ಮದನ್ ಹಾಗೂ ಕಿರಣ್ ಬಂಧಿತ ಆರೋಪಿಗಳು. ಆನಂದ್ ಹಲ್ಲೆಗೊಳಗಾದ ಮಾಲೀಕ. ಹಲ್ಲೆ ಮಾಡಿದ ಬಳಿಕ ಮದನ್ ಹಾಗೂ ಕಿರಣ್ ಪಾಂಡಿಚೇರಿಗೆ ಪರಾರಿಯಾಗಿದ್ದರು. ಆರೋಪಿಗಳು ಇರುವ ಜಾಗವನ್ನು ಪತ್ತೆ ಹಚ್ಚಿದ ಪೊಲೀಸರು ಅಲ್ಲಿಯೇ ಅವರನ್ನು ಬಂಧಿಸಿ ಕರೆತಂದಿದ್ದಾರೆ.

ಆಗಿದ್ದೇನು?:
ಬೇಗೂರಿನ ಗಾರ್ವೆಬಾವಿಪಾಳ್ಯದಲ್ಲಿ ಆನಂದ್ ಕಳೆದ 15 ವರ್ಷಗಳಿಂದ ತಿರುಮಲ ವಾಟರ್ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಅವರ ಕೈ ಕೆಳಗೆ ಸುಮಾರು 40 ಮಂದಿ ಕೆಲಸ ಮಾಡುತ್ತಿದ್ದಾರೆ. ಮದನ್ ತಾನು ರೌಡಿಶೀಟರ್ ಎಂದು ತಿಳಿಸದೆ ಆನಂದ್ ಬಳಿ ಕೆಲಸ ಕೇಳಿಕೊಂಡು ಬಂದಿದ್ದ. ಆತನ ಪರಿಸ್ಥಿತಿ ಅರಿತ ಆನಂದ್ ತನ್ನ ಕಾರು ಚಾಲಕನಾಗಿ ಕೆಲಸ ಮಾಡುವಂತೆ ತಿಳಿಸಿದ್ದ.

ಮದನ್ ಕೆಲಸಕ್ಕೆ ಸೇರಿದ ಕೆಲವು ದಿನಗಳ ಬಳಿಕ ಹೆಣ್ಣಮಕ್ಕಳನ್ನು ಚುಡಾಯಿಸುವುದು, ಫ್ಯಾಕ್ಟರಿಯಲ್ಲೇ ಗಾಂಜಾ ಸೇದುತ್ತಿದ್ದ. ಈ ವಿಚಾರವಾಗಿ ಮಾಲೀಕ ಆನಂದ್‍ಗೆ ತಿಳಿದಿದ್ದರಿಂದ ವೇತನ ನೀಡಿ ಮದನ್‍ನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದರಿಂದ ಕೋಪಗೊಂಡ ಮದನ್ ಸಹಚರರೊಂದಿಗೆ ಲಾಂಗ್ ಹಿಡಿದು ಫ್ಯಾಕ್ಟರಿಗೆ ನುಗ್ಗಿ ಆನಂದ್ ಮೇಲೆ ಜನವರಿ 30ರಂದು ಹಲ್ಲೆ ಮಾಡಿದ್ದ. ಅಷ್ಟೇ ಅಲ್ಲದೆ ವಾಟರ್ ಫ್ಯಾಕ್ಟರಿಯಲ್ಲಿದ್ದ ವಸ್ತುಗಳನ್ನು ಒಡೆದು, ಆನಂದ್‍ಗೆ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದ. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಮದನ್ ಹಾಗೂ ಆತನ ಸಹಚರರ ಕೃತ್ಯ ಸೆರೆಯಾಗಿತ್ತು.

ಈ ಕುರಿತು ಆನಂದ್ ಬೇಗೂರು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *