ಗಂಡ-ಹೆಂಡ್ತಿ ಜಗಳ ಸಾಮಾನ್ಯ, ಆದ್ರೆ ಡಿವೋರ್ಸ್ ಆಗಲ್ಲ: ಮಾಜಿ ಸಚಿವ ಎ.ಮಂಜು

ಹಾಸನ: ಯಾರಿಗೂ ಯಾವುದು ಅನಿವಾರ್ಯ ಅಲ್ಲ. ಅಭಿವೃದ್ಧಿ ಆಗಬೇಕು ಅಷ್ಟೆ. ಗಂಡ ಹೆಂಡತಿ ನಡುವೆ ನಡೆಯುವ ಜಗಳ ಸಾಮಾನ್ಯ, ಆದ್ರೆ ಅದ್ರಿಂದ ಡಿವೋರ್ಸ್ ಆಗಲ್ಲ ಎಂದು ಮಾಜಿ ಸಚಿವ ಎ ಮಂಜು ಹೇಳಿದ್ದಾರೆ.

ಕಾಂಗ್ರೆಸ್ ಗಿಂತ ಬಿಜೆಪಿಯ ಮೈತ್ರಿಯೇ ಚೆನ್ನಾಗಿತ್ತು ಎಂಬ ಸಚಿವ ಪುಟ್ಟರಾಜು ಹೇಳಿಕೆ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಅವರಿಗೆ ಎಲ್ಲರ ಜೊತೆ ಸಂಸಾರ ಮಾಡಿ ಅಭ್ಯಾಸ ಆಗಿದೆ. ಬಿಜೆಪಿ ಜೊತೆಗೂ ಮಾಡಿದ್ದಾರೆ ನಮ್ಮ ಜೊತೆಯೂ ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಳ್ಳುತ್ತಾರೆ ಹೊರತು ಅಭಿವೃದ್ಧಿಗೆ ಅಲ್ಲ. ಪುಟ್ಟರಾಜು ಸಚಿವರಾಗಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.

ನಾನು ಮಾತನಾಡಿದರೆ ತಪ್ಪು. ಅವರು ಮಾತನಾಡಿದರೆ ಸರಿ. ಯಾರಿಗೂ ಯಾವುದು ಅನಿವಾರ್ಯ ಅಲ್ಲ. ಅಭಿವೃದ್ದಿ ಆಗಬೇಕು ಅಷ್ಟೆ. ಗಂಡ-ಹೆಂಡತಿ ನಡುವೆ ನಡೆಯುವ ಜಗಳ ಸಾಮಾನ್ಯವಾಗಿರುತ್ತದೆ. ಆದ್ರೆ ಅದರಿಂದ ಡಿವೋರ್ಸ್ ಆಗಲ್ಲ ಎಂದು ಅವರು ಎರಡು ಪಕ್ಷದ ನಡುವಿನ ಒಳಜಗಳಗಳನ್ನು ಸಮರ್ಥಿಸಿಕೊಂಡರು.

ಇದೇ ವೇಳೆ ಹಾಸನ ಲೋಕಸಭೆ ಪ್ರಜ್ವಲ್ ರೇವಣ್ಣ ಸ್ಪರ್ಧೆ ವಿಚಾರದ ಕುರಿತು ಮತ್ತೆ ವಿರೋಧ ವ್ಯಕ್ತಪಡಿಸಿದ ಅವರು, ಮಾಜಿ ಪ್ರಧಾನಿ ದೇವೇಗೌಡ ಹಾಸನಕ್ಕೆ ಅಭ್ಯರ್ಥಿ ಆಗಬೇಕು ಅನ್ನೋದು ನಮ್ಮ ಆಸೆ. ದೇವೇಗೌಡರಂತಹ ಹಿರಿಯರು ನಮ್ಮ ಮೈತ್ರಿಯಲ್ಲಿ ಇರಬೇಕು. ಸಚಿವ ರೇವಣ್ಣರಿಗೆ ತಿಳುವಳಿಕೆ ಕಡಿಮೆ. ದೇವೇಗೌಡರು ಇರುವಾಗಲೇ ಮಗನೇ ಅಭ್ಯರ್ಥಿ ಅನ್ನೋದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.

ಪ್ರಜ್ವಲ್ ರೇವಣ್ಣರನ್ನು ಚುನಾವಣೆ ಕಣಕ್ಕಿಳಿಸಿದ್ರೆ ದೇವೇಗೌಡರಿಗೂ ಮತ್ತು ಹಾಸನದ ಜನತೆಗೆ ಅವಮಾನ ಮಾಡಿದಂತಾಗುತ್ತದೆ. ಈ ಬಗ್ಗೆ ಸಮನ್ವಯ ಸಮಿತಿಯಲ್ಲಿ ತೀರ್ಮಾನವಾಗದೆ ನಮ್ಮ ಕ್ಷೇತ್ರ ಅನ್ನೋದು ಸರಿಯಲ್ಲ ಅಂದ್ರು.

https://www.youtube.com/watch?v=8ldpuc1F85w

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *