ಪಾಕಿಸ್ತಾನ್ ಜಿಂದಾಬಾದ್ ಮೆಸೇಜ್ – ಆರೋಪಿ, ಗ್ರೂಪ್ ಅಡ್ಮಿನ್‍ಗೆ ಜಾಮೀನಿಲ್ಲ

ಬೆಂಗಳೂರು: ವಾಟ್ಸಪ್ ಗ್ರೂಪ್‍ನಲ್ಲಿ ಏನ್ ಮೆಸೇಜ್ ಮಾಡಿದರೂ ಯಾರು ಏನು ಮಾಡುವುದಕ್ಕೆ ಆಗುವುದಿಲ್ಲ ಎನ್ನುವವರಿಗೆ ಮಂಗಳವಾರ ಹೈಕೋರ್ಟ್ ಸರಿಯಾಗಿ ಚಾಟಿ ಬೀಸಿದೆ.

ವಾಟ್ಸಪ್ ಗ್ರೂಪ್‍ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂತ ಮೆಸೇಜ್ ಹಾಕಿದ್ದ ಸದಸ್ಯ ಹಾಗೂ ಅಡ್ಮಿನ್‍ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಈ ಮೂಲಕ ಗ್ರೂಪ್ ಅಡ್ಮಿನ್ ಗಳು ಹಾಗೂ ಮೆಸೇಜ್ ಹಾಕಿದ ಓರ್ವ ಸೇರಿದಂತೆ ಮೂವರ ಜೈಲುವಾಸ ಮುಂದುವರಿಯಲಿದೆ.

ಪ್ರಕರಣದ ಕುರಿತು ಇಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರರಾವ್ ಅವರು, ಘೋಷಣೆ ಒಂದೆರಡು ವಾಕ್ಯವಿರಬಹುದು. ಆದರೆ ಅದರ ಪರಿಣಾಮ ಮಾತ್ರ ತೀವ್ರ ಸ್ವರೂಪದ್ದಾಗಿದೆ. ಹೀಗಾಗಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿ ಜಾಮೀನು ನೀಡಲು ನಿರಾಕರಿಸಿದರು.

ಏನಿದು ಪ್ರಕರಣ?:
ಮುಸ್ತಾಫ್, ಶಬ್ಬೀರ್ ಸಾಬ್ ಹಾಗೂ ಚಾಂದ್ ಪಾಷಾ ಎಂಬವರು ಪಾಕಿಸ್ತಾನ್ ಜಿಂದಾಬಾದ್ ಅಂತ 2018ರ ಆಗಸ್ಟ್ 14ರಂದು ತಮ್ಮ ವಾಟ್ಸಪ್ ಗ್ರೂಪ್‍ನಲ್ಲಿ ಮೆಸೆಜ್ ಮಾಡಿದ್ದರು. ಇದರಿಂದ ಆಕ್ರೋಶ ಹೊರಹಾಕಿದ ಹನುಮನಗೌಡ ಎಂಬವರು ರಾಜದ್ರೋಹದ ಅಡಿಯಲ್ಲಿ ಕೊಪ್ಪಳದ ಕನಕಗಿರಯ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು.

ಈ ಕುರಿತು ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯವು ಕೂಡ ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕಾರ ಮಾಡಿತ್ತು. ಹೀಗಾಗಿ ಅದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಕೂಡ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *