ಅಧಿಕಾರ ಉಳಿಸಿಕೊಳ್ಳುವುದಕ್ಕೆ ಶ್ರೀಗಳನ್ನು ಬಳಸಿಕೊಳ್ಳಲ್ಲ- ಸಿಎಂ ಕುಮಾರಸ್ವಾಮಿ

ಮಂಡ್ಯ: ನನ್ನ ವೈಯಕ್ತಿಕ ವಿಚಾರ ಹಾಗೂ ಅಧಿಕಾರ ಉಳಿಸಿಕೊಳ್ಳುವುದಕ್ಕೆ ಶ್ರೀಗಳನ್ನು ಬಳಸಿಕೊಳ್ಳಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಆದಿಚುಂಚನಗಿರಿ ಮಠದಲ್ಲಿ ಆಯೋಜಿಸಿದ್ದ ಬಾಲಗಂಗಾಧರ ಶ್ರೀಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಿದ್ದರು. ಸರ್ಕಾರ ಬೀಳಲು ಹೊರಟಿರುವ ಬಿಜೆಪಿ ಶಾಸಕರಿಗೆ ನಿರ್ಮಲಾನಂದನಾಥ ಸ್ವಾಮೀಜಿ ತರಾಟೆ ತೆಗೆದುಕೊಂಡಿದ್ದಾರೆ ಎನ್ನುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ಮಾಧ್ಯಮಗಳು ರಾಜಕೀಯವಾಗಿ ನನ್ನ ಬಗ್ಗೆ ಹಾಗೂ ಸರ್ಕಾರದ ಕುರಿತು ಅನೇಕ ವರದಿ ಪ್ರಕಟಿಸಲಿ. ಆದರೆ ಇದರಲ್ಲಿ ನಿರ್ಮಲಾನಂದ ಶ್ರೀಗಳ ಹೆಸರನ್ನು ಪ್ರಸ್ತಾಪಿಸಬೇಡಿ. ಹೀಗೆ ಮಾಡುವುದರಿಂದ ಶ್ರೀಗಳಿಗೆ ಹಾಗೂ ಮಠಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಕೇಳಿಕೊಂಡರು.

ಸಮಾಜಕ್ಕೆ ಶ್ರೀಮಠ ಅನೇಕ ಕೊಡುಗೆಗಳನ್ನು ಕೊಟ್ಟಿದೆ. ನಿರ್ಮಲಾನಂದ ಶ್ರೀಗಳ ಹೆಸರನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ಒಂದು ಸಮಾಜದ ವ್ಯಕ್ತಿಗೋಸ್ಕರ ಶ್ರೀಗಳು ಯಾವತ್ತೂ ವಕಾಲತ್ತು ವಹಿಸಲ್ಲ. ನಾನು ಶಾಶ್ವತವಾಗಿ ಸಿಎಂ ಕುರ್ಚಿಯಲ್ಲಿ ಇರಲ್ಲ. ಭಗವಂತ ಎಷ್ಟು ದಿನ ಸಿಎಂ ಆಗಿರಬೇಕೆಂದು ಬರೆದುಬಿಟ್ಟಿದ್ದಾನೆ ಅಂತ ಗೊತ್ತಿಲ್ಲ. ಅಧಿಕಾರ ಕಳೆದುಕೊಳ್ಳುತ್ತೇನೆ ಎಂದು ಯಾವತ್ತೂ ಕುಗ್ಗಿಲ್ಲ ಎಂದು ಹೇಳಿದರು.

ಗುರುಹಿರಿಯರ ಆಶೀರ್ವಾದ ಇರುವವರೆಗೂ ಕಲ್ಲುಬಂಡೆಯಾಗಿಯೇ ಮುಂದುವರಿಯುತ್ತೇನೆ. ನನ್ನನ್ನು ಯಾರೂ ಏನೂ ಮಾಡಲು ಆಗಲ್ಲ ಎಂದು ಸಿಎಂ ಕುಮಾರಸ್ವಾಮಿ, ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು.

ಮಂಡ್ಯ ಜಿಲ್ಲೆಯ ಜನತೆ ನನಗೆ ರಾಜಕೀಯ ಶಕ್ತಿ ಕೊಟ್ಟಿದ್ದಾರೆ. ಹೀಗಾಗಿ ಅವರ ಕಷ್ಟವನ್ನು ಬಗೆ ಹರಿಸಬೇಕು. ಈ ನಿಟ್ಟಿನಲ್ಲಿ ಮಂಡ್ಯದಲ್ಲಿ ಹೊಸ ಎಥನಾಲ್ ಕಾರ್ಖಾನೆ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದ ಅವರು, ತೆಂಗು ಬೆಳೆಗಾರರಿಗೆ ಬೆಳೆ ಕೈಕೊಟ್ಟರೆ ಎಕರೆಗೆ 20 ಸಾವಿರ ರೂ. ಪರಿಹಾರ ಕೊಡುತ್ತೇವೆ. ಬೀದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ 10 ಸಾವಿರ ರೂ. ಸಾಲ ಕೊಡಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *