ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಮುಖಭಂಗ – ಗೂಂಡಾ ಪಾಲಿಟಿಕ್ಸ್‌ಗೆ ಬ್ರೇಕ್ : ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯ ಬಿಜೆಪಿಯ ಎಲ್ಲಾ ಶಾಸಕರು ಸರ್ಕಾರ ಉರುಳಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ ಅವರಿಗೆ 3ನೇ ಬಾರಿಗೆ ಮುಖಭಂಗವಾಗಿದ್ದು, ಬಿಜೆಪಿಯ ಗೂಂಡಾ ಪಾಲಿಟಿಕ್ಸ್ ಗೆ ಬ್ರೇಕ್ ಬಿದ್ದಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ ಹಾಗೂ ಅಶ್ವಥ್ ನಾರಾಯಣ್ ಅವರು ರಾಜ್ಯ ಸರ್ಕಾರವನ್ನು ಕೆಡವಲು ಪ್ರಯತ್ನಿಸಿದ್ದು, ಮಹಾರಾಷ್ಟ್ರದ ಬಿಜೆಪಿ ಶಾಸಕರ ಹೇಳಿಕೆಯೇ ಅವರ ಕೈವಾಡ ಬಗ್ಗೆ ಸ್ಪಷ್ಟವಾಗಿ ತಿಳಿಸುತ್ತದೆ. ಇದರೊಂದಿಗೆ ಬಿಜೆಪಿಗೆ ನಾಯಕರಿಗೆ 3ನೇ ಬಾರಿಗೆ ಮುಖಭಂಗವಾಗಿದ್ದು, ಮಾನ ಮರ್ಯಾದೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಮಿತ್ ಶಾ ಹಾಗೂ ಯಡಿಯೂರಪ್ಪನವರಿಗೆ ಇದರಿಂದ ಕಪಾಳ ಮೋಕ್ಷವಾಗಿದ್ದು, ಬಿಜೆಪಿಯ ಗೂಂಡಾ ಪಾಲಿಟಿಕ್ಸ್ ಗೆ ಬ್ರೇಕ್ ಬಿದ್ದಿದೆ. ಇದೇ ವೇಳೆ ಮೋದಿಯವರ ಮಾಫಿಯಾ ಪಾಲಿಟಿಕ್ಸ್ ತೆಗೆಯಬೇಕಿದೆ ಎಂದರು. ಅಲ್ಲದೇ ಇಂತಹ ನಡೆ ಪ್ರಜಾಪ್ರಭುತ್ವ ಕಗ್ಗೊಲೆ ಆಗಿದ್ದು, ಇಂದು ದೇಶದ ಮುಂದೆ ಬಿಜೆಪಿ ತಲೆ ಎತ್ತದಂತಾಗಿದೆ ಎಂದರು.

ಇದೇ ವೇಳೆ ಮಾತನಾಡಿದ ಗೃಹ ಸಚಿವ ಎಂಬಿ ಪಾಟೀಲ್, ಸಮ್ಮಿಶ್ರ ಸರ್ಕಾರ ಬೀಳುವ ಪ್ರಯತ್ನ ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಮಾನ ಮಾರ್ಯದೆ ಹರಾಜು ಆಗಿದೆ. ಆಪರೇಷನ್ ಕಮಲದ ಹಿಂದೆ ಅಮಿತ್ ಶಾ ಅಥವಾ ಬಿಎಸ್‍ವೈ ಯಾರೇ ಇದ್ರು, ಅವರ ತಲೆದಂಡವಾಗುವುದು ಖಚಿತ ಎಂದರು.

ನಮ್ಮ ಸರ್ಕಾರ ರಾಜ್ಯದಲ್ಲಿ ಸುಭದ್ರವಾಗಿದ್ದು, ನಮ್ಮೆಲ್ಲ ಶಾಸಕರು ಜೊತೆಗಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕ ನಾಗೇಂದ್ರ ನನ್ನ ಸ್ನೇಹಿತರು. ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅಲ್ಲದೇ ಪಕ್ಷೇತರ ಶಾಸಕರು ಕೂಡ ನಮ್ಮ ಜೊತೆಗೆ ಇದ್ದಾರೆ. ಮುಂದಿನ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಎಲ್ಲರೂ ಇರುತ್ತಾರೆ ಎಂದು ಸ್ಪಷ್ಟಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *