ಸಂಕ್ರಾಂತಿ ಹಬ್ಬಕ್ಕೆ ಹಣ ಕೊಡದ್ದಕ್ಕೆ ಹೆಣವಾದ್ಲು ಪತ್ನಿ!

ಚೆನ್ನೈ: ಸಂಕ್ರಾಂತಿ ಹಬ್ಬಕ್ಕೆ ಬಂದ ಪತ್ನಿ ಹಣ ಕೊಡಲಿಲ್ಲ ಅಂತ ಆಕೆ ಮಲಗಿದ್ದ ವೇಳೆ ಕತ್ತು ಕೊಯ್ದು ಪತಿಯೇ ಕೊಲೆಗೈದ ಘಟನೆ ಶನಿವಾರದಂದು ತಮಿಳುನಾಡಿನ ಒಸಿಲಿಂಪಟ್ಟಿ ಗ್ರಾಮದ ಮಧುರೈ ಜಿಲ್ಲೆಯಲ್ಲಿ ನಡೆದಿದೆ.

ರಸಾತಿ(65) ಕೊಲೆಯಾದ ದುರ್ದೈವಿ. ರಾಮರ್(70) ಕೊಲೆ ಮಾಡಿರುವ ಪಾಪಿ ಪತಿ. ರಸಾತಿ ಕೇರಳದಲ್ಲಿ ದಿನಕೂಲಿ ಕೆಲಸ ಮಾಡಿಕೊಂಡು ತಿಂಗಳಿಗೆ ಒಮ್ಮೆ ಮನೆಗೆ ಬರುತ್ತಿದ್ದಳು. ಅಲ್ಲದೆ ತನ್ನ ದುಡಿಮೆಯಲ್ಲಿಯೇ ಕುಟುಂಬವನ್ನು ಸಾಕುತ್ತಿದ್ದಳು. ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮಿಳುನಾಡು ಸರ್ಕಾರ ದಿನಕೂಲಿ ಕಾರ್ಮಿಕರಿಗೆ 1 ಸಾವಿರ ರೂ. ಹಣ ನೀಡಿತ್ತು. ಆದ್ರೆ ಆ ಹಣದಲ್ಲಿ ಅರ್ಧ ಅಂದ್ರೆ 500 ರೂ. ರಾಮರ್ ತನಗೆ ಕೊಡು ಎಂದು ಕೇಳಿದ್ದಾನೆ. ಈ ವೇಳೆ ಪತಿ ಪತ್ನಿಯ ನಡುವೆ ರಾತ್ರಿ ಜಗಳ ಕೂಡ ನಡೆದಿದೆ.

ಈ ಜಗಳದಿಂದ ಕೋಪಗೊಂಡಿದ್ದ ರಾಮರ್, ಶನಿವಾರ ಬೆಳಗಿನ ಜಾವ ಸುಮಾರು 4 ಗಂಟೆ ಹೊತ್ತಿಗೆ ನಿದ್ರೆಗೆ ಜಾರಿದ್ದ ಪತ್ನಿಯ ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾನೆ. ಬಳಿಕ ಆರೋಪಿ ರಾಮರ್ ತಾನೆ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ವಿಷಯ ತಿಳಿಸಿ ಶರಣಾಗಿದ್ದಾನೆ.

ರಾಮರ್‍ನ ಪತ್ನಿ ಕೆಲಸದ ಮೇಲೆ ದೂರ ಉಳಿದಿದ್ದ ಕಾರಣಕ್ಕೆ ಆತ ಕೆಟ್ಟ ಚಟಗಳಿಗೆ ದಾಸನಾಗಿದ್ದ. ಅಲ್ಲದೇ ಸ್ಥಳಿಯರ ಬಳಿ ಸಾಕಷ್ಟು ಹಣವನ್ನು ಕೂಡ ಸಾಲ ಪಡೆದಿದ್ದ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮಹಿಳೆಯ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *